ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಮೀಪದ ಜಕ್ಕಲಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿ ಬಸಪ್ಪ ಮುಕ್ಕಣ್ಣವರ ಮಂಗಳವಾರ ಬೆಳಿಗ್ಗೆ 8.30ಕ್ಕೆ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಸಾವೀಗೀಡಾಗಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ಘಟನೆಯ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯ ಮುಂದಿನ ರಸ್ತೆಯಲ್ಲಿ ಹಾಕಿದ್ದ ಹೆಸರಿನ ರಾಶಿಯನ್ನು ತೆಗೆದು ನನ್ನ ಕಾರು ಹೋಗಲು ಅನುಕೂಲ ಮಾಡಿಕೊಡಿ ಎಂದು ಆರೋಪಿ ಯಲ್ಲಪ್ಪ ಫಕೀರಪ್ಪ ಕುರಿ ಬಸಪ್ಪ ಮುಕ್ಕಣ್ಣವರ ಅವರಿಗೆ ಹೇಳಿದ್ದಾನೆ. ಅವರೂ ಸಹ ತೆಗೆಯಲು ಒಪ್ಪಿಕೊಂಡು ತೆಗೆಯುವ ಅವಸರದಲ್ಲಿದ್ದಾಗ ಆರೋಪಿ ಯಲ್ಲಪ್ಪ ಅವರೊಂದಿಗೆ ಕ್ಯಾತೆ ತೆಗದು ಜಗಳಕ್ಕೆ ನಿಂತಿದ್ದಾನೆ.
ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಜಗಳವನ್ನು ಬಿಡಿಸಲು ಬಸಪ್ಪನ ಹೆಂಡತಿ ಹನುಮವ್ವನೂ ಬಂದಿದ್ದಾಳೆ. ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿ ಇಲ್ಲದಿದ್ದ ಯಲ್ಲಪ್ಪ ಕೈಗೆ ಸಿಕ್ಕ ಕಬ್ಬಿಣದ ರಾಡ್ನಿಂದ ಬಸಪ್ಪನ ತಲೆಗೂ, ಹನುಮವ್ವಳ ಕಾಲಿಗೂ ಜೋರಾಗಿ ಹೊಡೆದಿದ್ದಾನೆ. ಈ ಘಟನೆ ಸೋಮವಾರ ಸಂಜೆ ನಡೆದಿದೆ ಎಂದು ಎಸ್.ಪಿ. ನೇಮಗೌಡ ಹೇಳಿದರು.
ತೀವ್ರ ಗಾಯಗೊಂಡ ಬಸಪ್ಪನನನ್ನು ಸೋಮವಾರ ರಾತ್ರಿಯೆ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿನ ವೈದ್ಯರ ಸೂಚನೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೆ ಬಸಪ್ಪ ಮಂಗಳವಾರ ಬೆಳಿಗ್ಗೆ 8.30ಕ್ಕೆ ನಿಧನ ಹೊಂದಿದ್ದಾನೆ.
ಮೃತನ ಹೆಂಡತಿ ಹನುಮವ್ವ ಬಸಪ್ಪ ಮುಕ್ಕಣ್ಣವರ ಯಲ್ಲಪ್ಪ ಫಕೀರಪ್ಪ ಕುರಿ, ಫಕೀರಪ್ಪ ಯಲ್ಲಪ್ಪ ಕುರಿ, ಬಾಳವ್ವ ಫಕೀರಪ್ಪ ಕುರಿ ಹಾಗೂ ಶಶಿಕಲಾ ಫಕೀರಪ್ಪ ಕುರಿ ಈ ನಾಲ್ಕೂ ಜನರ ಮೇಲೆ ನೀಡಿದ ದೂರಿನನ್ವಯ ಯಲ್ಲಪ್ಪನನ್ನು ಹೊರತುಪಡಿಸಿ ಮೂವರನ್ನೂ ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ನರೇಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಜಕ್ಕಲಿ ಗ್ರಾಮಕ್ಕೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ಪ್ರಭುಗೌಡ, ರೋಣ ಸಿಪಿಐ ಎಸ್.ಎಸ್. ಬೀಳಗಿ ಭೇಟಿ ನೀಡಿ ಪರಿಶೀಲಿಸಿದರು.
ಮೊದಲ ಆರೋಪಿ ಯಲ್ಲಪ್ಪ ಫಕೀರಪ್ಪ ಕುರಿ ಚಿಕಿತ್ಸೆಗೆಂದು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವದರಿಂದ ನಂತರ ಅವನನ್ನು ವಶಕ್ಕೆ ಪಡೆಯಲಾಗುವುದು. ಅಕ್ಕಪಕ್ಕದ ಮನೆಯವರಾದ ಇವರು ಚಿಕ್ಕಪುಟ್ಟ ಕಾರಣಕ್ಕೂ ಮೇಲಿಂದ ಮೇಲೆ ಜಗಳವಾಡುತ್ತಿದ್ದರು. ಸೋಮವಾರ ಜಗಳ ವಿಕೋಪಕ್ಕೆ ಹೋಗಿ ಹೆಸರಿನ ರಾಶಿ ತೆಗೆಸುವ ನೆಪದಲ್ಲಿ ಈ ಕೊಲೆ ನಡೆದಿದೆ ಎಂದು ಎಸ್ಪಿ ನೇಮಗೌಡ ತಿಳಿಸಿದರು.