ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀಗುರು ಹಾನಗಲ್ ಕುಮಾರೇಶ್ವರ ಗುರುಗಳು ಶ್ರೀರಕ್ಷೆ ನೀಡದಿದ್ದರೆ ವೀರೇಶ್ವರ ಪುಣ್ಯಾಶ್ರಮ ನಿರ್ಮಾಣ ಆಗುತ್ತಿರಲಿಲ್ಲ ಎಂದು ಮುಂಡರಗಿ ಸಂಸ್ಥಾನ ಮಠದ ಪೂಜ್ಯಶ್ರೀ ಜ. ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಜರುಗಿದ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ.ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೀರ್ತನ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮುಂಡರಗಿಯ ಶ್ರೀಮಠಕ್ಕೆ ಮತ್ತು ವಿರೇಶ್ವರ ಪುಣ್ಯಾಶ್ರಮಕ್ಕೆ ಬಹಳ ನಂಟಿದೆ. ಈ ಹಿಂದೆ ಪುಣ್ಯಾಶ್ರಮವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಹೇಮರಡ್ಡಿ ಮಲ್ಲಮ್ಮ ನಾಟಕ ಒಂದು ವರ್ಷ ಪ್ರದರ್ಶನ ಕಂಡು ಸಂಕಷ್ಟದಿಂದ ಪಾರು ಮಾಡಿತು. ಅಲ್ಲದೆ, ಆಶ್ರಮವು ಉತ್ತರೋತ್ತರವಾಗಿ ಬೆಳೆಯಲು 1,11,111 ರೂ.ಗಳನ್ನು ನೀಡಿದ್ದೆವು.
ಸಂಗೀತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ, ಸಂಗೀತಕ್ಕೆ ಮನಸೋಲದವರು ಯಾರೂ ಇಲ್ಲ. ಇಲ್ಲಿ ಸಂಗೀತ ವಿದ್ಯೆ ಕಲಿತ ವಿದ್ಯಾರ್ಥಿಗಳು ವಿಶ್ವದಾದ್ಯಂತ ಪುಣ್ಯಾಶ್ರಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಉಭಯ ಗುರುಗಳ ಸಂಗೀತ, ಸಾಹಿತ್ಯ ಶಿಕ್ಷಣಹಾಗೂ ಗುರು ಪರಂಪರೆಯನ್ನು ಇಂದಿನ ಗುರುಗಳಾದ ಕಲ್ಲಯ್ಯಜ್ಜನವರು ಮುಂದುರೆಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನಕಗಿರಿ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಪೂಜ್ಯಶ್ರೀ ಡಾ. ಚನ್ನಮಲ್ಲ ಮಹಾಸ್ವಾಮಿಗಳು, ಯಲಬುರ್ಗಾ ಮುರುಡಿ ಹಿರೇಮಠದ ಪೂಜ್ಯಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಅಭಿನವ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು, ಹೂವಿನಹಡಗಲಿ ಗವಿಸಿದ್ದೇಶ್ವರ ಶಾಖಾ ಮಠದ ಪೂಜ್ಯಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಅಣ್ಣಿಗೇರಿ ದಾಸೋಹ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು, ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಓಂಕಾರೇಶ್ವರ ಹಿರೇಮಠದ ಪೂಜ್ಯಶ್ರೀ ಫಕೀರೇಶ್ವರ ಪಟ್ಟಾಧ್ಯಕ್ಷರು, ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯಶ್ರೀ ಶಿವಶರಣೆ ಮೈತ್ರಾದೇವಿ ತಾಯಿಯವರು, ಸಂಭಾಪುರದ ಈರಮ್ಮ ತಾಯಿ ಆಶ್ರಮದ ಪೂಜ್ಯಶ್ರೀ ಅಭಿನವ ರುದ್ರಮ್ಮ ತಾಯಿಯವರು ಸಮ್ಮುಖ ವಹಿಸಿದ್ದರು.
ವೇದಿಕೆಯ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಸಿದ್ದನಗೌಡ ಪಾಟೀಲ, ಶೇಖಣ್ಣ ಗದ್ದಿಕೇರಿ, ಶಶಿಧರ ಬಿದನೂರ, ವೀರಣ್ಣ ಕಾಡಪ್ಪನವರ, ರಾಜು ಬೂದನೂರ, ನಿರಂಜನ ಬುಳ್ಳ, ಚನ್ನಬಸಯ್ಯ ಬಂಕಾಪೂರಮಠ, ಮಂಜುನಾಥ ಹುಚ್ಚಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂ.ಪುಟ್ಟರಾಜ ಕವಿಗವಾಯಿಗಳು ರಚಿಸಿದ ಗಾನಸುಧಾ ಭಾಗ-1 ಗ್ರಂಥ ಹಾಗೂ `ಆರೋಡ ಸಿರಿ’ ಧ್ವನಿ ಸುರುಳಿ ಬಿಡುಗಡೆಯಾದವು. ಪಂ.ಶಿವಾನಂದೀಶ್ವರ ಶಾಸ್ತ್ರೀಗಳು ಹಾಗೂ ತಾವರಗೆರೆಯ ಪಂ. ಶಿವರಾಜಶಾಸ್ತ್ರೀಗಳು ಪಂ. ಪುಟ್ಟರಾಜ ಗವಾಯಿಗಳವರ ಕೀರ್ತನ ಮಾಡಿದರು. ರಾತ್ರಿ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮ ಜರುಗಿತು.
ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಯೋಗ ಮಂದಿರ ಮಠಾದೀಶರನ್ನು ನಿರ್ಮಾಣ ಮಾಡಿದರೆ ಉಭಯ ಶ್ರೀಗಳು ಅಂಧ-ಅನಾಥ ಬದುಕನ್ನು ಬೆಳಗಿದ್ದಾರೆ. ದೇವರನ್ನು ಹುಡುಕಿಕೊಂಡು ಹೋಗುವದರಿಂದ ದೇವರು ಸಿಗುವದಿಲ್ಲ, ಕಣ್ಣಿಗೆ ಕಾಣುವ ಗುರುವಿನ ಪಾದವನ್ನು ಗಟ್ಟಿಯಾಗಿ ಹಿಡಿದರೆ ಕಾಣದ ದೇವರು ಕೈ ಹಿಡಿಯುತ್ತಾನೆ. ಕಲ್ಲಯ್ಯಜ್ಜನವರು ಎಲ್ಲ ಗುರು ಬಂಧುಗಳನ್ನು ಕಟ್ಟಿಕೊಂಡು ಉಭಯ ಗುರುಗಳ ಮಾರ್ಗದರ್ಶನದಂತೆ ಪುಣ್ಯಾಶ್ರಮವನ್ನು ಉತ್ತರೋತ್ತರವಾಗಿ ಬೆಳೆಸುತ್ತಿದ್ದಾರೆ. ಪುಣ್ಯಾಶ್ರಮವು ಮುಗಿಲೆತ್ತರಕ್ಕೆ ಬೆಳೆಯಬೇಕು. ಅದು ಬೆಳೆದರೆ ಸಾವಿರಾರು ಅಂಧ-ಅನಾಥರಿಗೆ ಆಶ್ರಯ ಸಿಗುತ್ತದೆ ಎಂದು ಹೇಳಿದರು.