ವಿಜಯಸಾಕ್ಷಿ ಸುದ್ದಿ, ಗದಗ : ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಿದ ಕಿತ್ತೂರು ಚನ್ನಮ್ಮಳ ಧೈರ್ಯ, ಸಾಹಸ ಸರ್ವ ಕಾಲಕ್ಕೂ ಮಾದರಿಯಾಗಿದೆ ಎಂದು ಪಂಚಮಸಾಲಿ ಸಮಾಜ ಮುಖಂಡ, ಉದ್ದಿಮೆದಾರ ವಿಜಯಕುಮಾರ ಗಡ್ಡಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಕೇಶವ ಪಾರ್ಕ್ನ ಅಷ್ಟಭುಜ ಈಶ್ವರ ದೇವಸ್ಥಾನದ ಆವರಣದಲ್ಲಿ ಕೇಶವ ಪಾರ್ಕ್ ಬಡಾವಣೆ, ಪುಟ್ಟರಾಜ ನಗರ ಭಾಗ 1, 2ನೇ ಹಂತದ ಬಡಾವಣೆಯ ಸರ್ವ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರ ಚನ್ನಮ್ಮಳ 246ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಿತ್ತೂರ ಚನ್ನಮ್ಮ ತೋರಿದ ಧೈರ್ಯ, ಸಾಹಸ ನಾಡಿನ ಅಭಿಮಾನವಾಗಿದ್ದು, ನಮ್ಮೆಲ್ಲರ ಮನ ಮನೆಗಳಲ್ಲಿ ಹಾಸು ಹೊಕ್ಕಾಗಬೇಕು. ಅವರು ತೋರಿದ ದಿಟ್ಟತನದ ಹೋರಾಟ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಇಂತವರ ದಿನಾಚರಣೆ ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಆರ್. ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ದಿಮೆದಾರ ಅಶೋಕ ಸಂಕಣ್ಣವರ ಮುಂತಾದವರು ಚನ್ನಮ್ಮಾಜಿಯ ಕುರಿತು ಮಾತನಾಡಿದರು. ಸಿದ್ಧಗಂಗಾಶ್ರೀ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಎಸ್. ಹಿರೇಮಠ, ಪಂಚಮಸಾಲಿ ಯುವ ಘಟಕದ ಅಯ್ಯಪ್ಪ ಅಂಗಡಿ, ಕೊಪ್ಪಳ ಸರ್ಕಾರಿ ಡಿಪ್ಲೋಮಾ ಕಾಲೇಜಿನ ಎಚ್ಓಡಿ ಅನುಪಮಾ ಹೊಸಮನಿ ಮುಂತಾದವರು ವೇದಿಕೆಯಲ್ಲಿದ್ದರು. ಬಡಾವಣೆಯ ಗುರು-ಹಿರಿಯರು, ತಾಯಂದಿರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಪಾಟೀಲ, ನಿವೃತ್ತ ಸೈನಿಕ ಎಸ್.ಬಿ. ಮೇಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣಪ್ಪ ಪಲ್ಲೇದ, ಉಮೇಶ ಮುಳ್ಳಾಳ, ಪ್ರಭು ಬಳ್ಳಾರಿ, ಅಶೋಕ ಪಾಟೀಲ, ಪ್ರಕಾಶ ಹೊಸೂರ, ರಾಜೇಂದ್ರ ನರೇಗಲ್, ಪ್ರಕಾಶ ಹಡಗಲಿ, ರಾಜೇಂದ್ರ ನರೇಗಲ್ಲ, ಎಸ್.ಎನ್. ಮಾಳೆಕೊಪ್ಪ, ಕೆ.ಎಸ್. ಮೊಕಾಶಿ, ಈಶ್ವರಗೌಡ ಹುಡೇದ, ಮಲ್ಲು ಪಾಟೀಲ, ಜಿ.ಬಿ. ನಿಡಗುಂದಿ, ಸಿ.ಬಿ. ಬಳ್ಳಾರಿ, ಸೋಮು ಪವಾಡಶೆಟ್ಟರ, ನಾಗರಾಜ ಶಿರೂರ, ಬಸಯ್ಯ ರುದ್ರಾಪೂರಮಠ ಹಾಗೂ ಬಡಾವಣೆಯ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಪುಟ್ಟರಾಜ ನಗರ 2ನೇ ಹಂತದ ಅಧ್ಯಕ್ಷ ಶಿವಕುಮಾರ ಕುಷ್ಟಗಿ ಮಾತನಾಡಿ, ಚನ್ನಮ್ಮಳ ಜಯಂತಿಯನ್ನು ಸರ್ವ ಸಮುದಾಯದವರು ಕೂಡಿಕೊಂಡು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಆಚರಣೆಗಳು ಸಮ ಸಮಾಜ ಕಟ್ಟುವಲ್ಲಿ ಕ್ರಾಂತಿಕಾರಕ, ದಿಟ್ಟ ಹೆಜ್ಜೆಯನ್ನು ಇಡಲು ಸಹಕಾರಿಯಾಗುತ್ತದೆ ಎಂದರು.