ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ರಾಷ್ಟ್ರಮಾತೆ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ 247ನೇ ಜಯಂತ್ಯುತ್ಸವ, 201ನೇ ವಿಜಯೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ನಂತರ ಮಾರುತಿ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ತಾಲೂಕು ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಚೆನ್ನಮ್ಮಾಜಿಯವರೇ ಹೋರಾಟ ಪ್ರಾರಂಭಿಸಿದ್ದು, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿ ದೇಶಕ್ಕೆ ಹೆಮ್ಮೆಯ ಮಹಿಳೆಯಾಗಿದ್ದಾಳೆ. ಆ ಧೀರ ಮಹಿಳೆಯ ಜಯಂತಿ ಆಚರಣೆ ಮೂಲಕ ಮಕ್ಕಳಲ್ಲಿ ಅವರ ಧೈರ್ಯ-ಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು. ಮಕ್ಕಳಿಗೆ ಸಮಾಜ ಬಾಂಧವರು ನೈತಿಕ ಶಿಕ್ಷಣದ ಜೊತೆ, ದೇಶಾಭಿಮಾನ ಬೆಳೆಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂ.ಡಿ. ಪಾಟೀಲ, ಶಿವಾನಂದ ದೇಸಾಯಿ, ಗುರಣ್ಣ ಮುಳಗುಂದ, ಬಸವಣ್ಣೆಪ್ಪ ಬಳಿಗಾರ, ಹೊನ್ನಪ್ಪ ವಡ್ಡರ, ಮಂಜುನಾಥ ಗೌರಿ, ಪರಮೇಶಪ್ಪ ಹಂಗನಕಟ್ಟಿ, ನಾಗರಾಜ ಪಾಟೀಲ, ವೀರೇಂದ್ರಕುಮಾರ ಕಟಗಿ, ಪರ್ವತಗೌಡ, ಚನ್ನಪ್ಪ ಅಂಗಡಿ, ಬಸವನಗೌಡ ಪಾಟೀಲ, ಹಾಲಪ್ಪ ಹಳ್ಳಿಕೇರಿ ಸೇರಿದಂತೆ ಕುಂದ್ರಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಊರಿನ ಗುರು-ಹಿರಿಯರು ಪಾಲ್ಗೊಂಡಿದ್ದರು. ಸುನೀಲ ಹಂಗನಕಟ್ಟಿ ವಂದಿಸಿದರು.


