ದಿನಾಚರಣೆಗಳ ಹಿನ್ನೆಲೆ ಅರಿಯಿರಿ

0
womens day
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಎಲ್ಲಾ ದಿನಾಚರಣೆಗಳನ್ನು ಕೇವಲ ಆಚರಣೆಗೆ ಸೀಮಿತವಾಗಿಸದೇ ಅದರ ಹಿನ್ನೆಲೆ, ಉದ್ದೇಶ ಏನು ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಚರಿಸಲು ಕಾರಣ ಹಾಗೂ ಉದ್ದೇಶವನ್ನು ಅರಿಯಬೇಕು ಎಂದು 1ನೇ ಅಪರ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಖಾದರಸಾಬ ಹೆಚ್ ಬೆನಕಟ್ಟಿ ನುಡಿದರು.

Advertisement

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ, ಜಿಲ್ಲಾ ನ್ಯಾಯವಾದಿಗಳ ಸಂಘ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 18 ಹಾಗೂ 19ನೇ ಶತಮಾನಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗಾಗಿ ಅನೇಕ ಹೋರಾಟಗಳು ನಡೆದಿವೆ. ಅನೇಕ ಹೋರಾಟಗಳ ಫಲವಾಗಿ ಇಂದು ಮಹಿಳೆಯರಿಗೆ ಒಳ್ಳೆಯ ಸ್ಥಾನ, ಹಕ್ಕುಗಳು ದೊರೆತಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸಿಜೆಎಂ ಪ್ರೀತಿ ಸದ್ಗುರು ಸದರಜೋಷಿ ಮಾತನಾಡಿ, ಹೆಣ್ಣು ಎಂದಿಗೂ ಹಸನ್ಮುಖಿಯಾದ ಲಕ್ಷ್ಮಿಯಾಗಿರಬೇಕು. ಆದರೆ ಅಗತ್ಯ ಬಿದ್ದರೆ ದುರ್ಗೆಯ ಅವತಾರವನ್ನೂ ತಾಳಬೇಕು. ಇಂದು ಮಹಿಳೆ ಪುರುಷರಿಗೆ ಸರಿಸಮನಾಗಿ ಬೆಳೆದಿದ್ದಾಳೆ.

ಯಶಸ್ವಿ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರವೂ ಇದೆ ಎಂದರು.

ಇನ್ನೋರ್ವ ಅತಿಥಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷವಾದ ಕಾನೂನುಗಳನ್ನು ರಚಿಸಲು ಅವಕಾಶವಿದೆ. ಅದರ ಅಡಿ ಈಗಾಗಲೇ ಅನೇಕ ಕಾನೂನುಗಳನ್ನು ಸರ್ಕಾರ ರಚಿಸಿದ್ದಾರೆ. ಅದರ ಅರಿವನ್ನು ಹೊಂದಬೇಕು. ಆದರೆ, ಇನ್ನೂ ಮನೆಯಲ್ಲಿ ಅಥವಾ ಮನೆಯಾಚೆಗೂ ಮಹಿಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಆದ್ದರಿಂದ ಹೆಣ್ಣು ಚಿಕ್ಕವಳಿದ್ದಾಗಿನಿಂದ ಧೈರ್ಯದಿಂದ ಸಮಸ್ಯೆ ಎದುರಿಸಲು ಕಲಿಸಬೇಕು ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆದಿದ್ದು, ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.

ವೇದಿಕೆಯ ಮೇಲೆ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಡಾ. ಕಮಲವ್ವ ಬೈಲೂರ, ಸಿಡಿಪಿಒ ಎಚ್.ಎಸ್. ಜೋಗೇರ ಉಪಸ್ಥಿತರಿದ್ದರು. ಕಾರ್ಯಕ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ಮಹಿಳಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಷಹನಾಜ ತೆಗ್ಗಿನಮನಿ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಗುರುಬಸವನಗೌಡರ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಬಿ. ಹಿರೇಮನಿಪಾಟೀಲ ಮಾತನಾಡಿ, ಶಿಲಾಯುಗದ ಕಾಲದಿಂದಲೂ ಪುರುಷ ಪ್ರಧಾನತ್ವ ಇದೆ, ಇಂದೂ ಸಹ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಾ ನಂತರ ಡಾ. ಬಿ.ಆರ್. ಅಂಬೇಡ್ಕರ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆಯರಿಗೂ ಯಾವುದೇ ತಾರತಮ್ಯ ಇಲ್ಲದೇ ಸಮಾನ ಸ್ಥಾನ-ಮಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದೇಶದ ಅಭಿವೃದ್ಧಿಗೆ ಮಹಿಳೆಯರು ಎಲ್ಲಾ ರಂಗದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here