ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಏಕಾಗ್ರತೆ ಮತ್ತು ಜ್ಞಾನದ ಕೊರತೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಮಾನಸಿಕ ಮತ್ತು ದೈಹಿಕ ಸಮಸ್ಯೆ ಎದುರಿಸುತ್ತಿರುವ ಮನುಷ್ಯನಿಗೆ ನೆಮ್ಮದಿ ನೀಡುವ ತಾಣವಾಗಿರುವ ಈಶ್ವರೀಯ ವಿಶ್ವವಿದ್ಯಾಲಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಡಾ. ಪಿ.ಡಿ. ತೋಟದ ಹೇಳಿದರು.
ಅವರು ಬುಧವಾರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಮೆರವಣಿಗೆ ಹಾಗೂ ತ್ರಿಮೂರ್ತಿ ಶಿವನ 89ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ. ಕಲಿವಾಳಮಠ, ಬಸಣ್ಣ ಬೆಂಡಿಗೇರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒತ್ತಡದ ಬದುಕು ಮೈಗೂಡಿಸಿಕೊಂಡವರು. ಈಶ್ವರೀಯ ವಿಶ್ವವಿದ್ಯಾಲಯಲ್ಲಿರುವ ಜ್ಞಾನ ಸಂಪತ್ತು ಪಡೆದುಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕಿದೆ. ಇಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶಿವರಾತ್ರಿಯ ಕಾರ್ಯಕ್ರಮ ಹಾಗೂ ಶಿವನ ಜ್ಞಾನ ನೀಡುವ ಪ್ರವಚನಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಜ್ಞಾನ ಪಡೆಯಬೇಕು ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ನಾಗಲಾಂಬಿಕೆ ಮಾತನಾಡಿ, ಶಿವರಾತ್ರಿಯಲ್ಲಿ ಆಚರಿಸಲ್ಪಡುವ ಶಿವಜಯಂತಿಯ ಮಹತ್ವವನ್ನು ವಿವರಿಸಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ದ್ವಾದಶ ಜ್ಯೋತಿರ್ಲಿಂಗಗಳ ಭವ್ಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೂರ್ಣ ಕುಂಭಗಳನ್ನು ಹೊತ್ತ ಮಹಿಳೆಯರು ಹಾಗೂ ಪ್ರಮುಖರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಎಸ್.ಜಿ. ಹೂವಿನ್, ಡಾ. ಪ್ರಸನ್ನ ಕುಲಕರ್ಣಿ, ಡಾ. ನಾಗರಾಜ ವಾಲಿ, ವೆಂಕಟೇಶ ಮಾತಾಡೆ, ಶಕ್ತಿ ಕತ್ತಿ, ಎಂ.ಕೆ. ಕಳ್ಳಿಮಠ, ಡಿ.ಎಂ. ಪೂಜಾರ, ಬಸವರಾಜ ಸಂಗಪ್ಪಶೆಟ್ಟರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.