ವಿಜಯಸಾಕ್ಷಿ ಸುದ್ದಿ, ಗದಗ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವಲ್ಲಿ ನಿರತವಾಗಿದೆ. ಪ್ರಸ್ತುತ ಸಂಸ್ಥೆಯ 9 ವಿಭಾಗಗಳಿಂದ ಪ್ರತಿದಿನ ಸರಾಸರಿ ಸುಮಾರು 4550 ಅನುಸೂಚಿಗಳಿಂದ ಒಟ್ಟು 15.50 ಲಕ್ಷ ಕಿ.ಮೀ ಕಾರ್ಯಾಚರಿಸುತ್ತಿದ್ದು, 25 ಲಕ್ಷ ಜನ ಪ್ರಯಾಣಿಕರು ಪ್ರತಿದಿನ ಪ್ರಯಾಣಿಸುತ್ತಿದ್ದಾರೆ. ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳ 4610 ಹಳ್ಳಿಗಳ ಪೈಕಿ ಬಸ್ ಸಂಚಾರ ಯೋಗ್ಯ ರಸ್ತೆಗಳಿರುವ 4565 ಹಳ್ಳಿಗಳಿಗೆ ಅವಶ್ಯಕ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಬೇಡಿಕೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ನವೀಕರಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯದ ಅನುದಾನದ ಸಹಾಯದಿಂದ ಮತ್ತು ಸಂಸ್ಥೆಯ ಆಂತರಿಕ ಬಂಡವಾಳದೊಂದಿಗೆ ಪ್ರಾದೇಶಿಕ ಕಾರ್ಯಾಗಾರ ಹುಬ್ಬಳ್ಳಿಯಲ್ಲಿ 68 ಹಳೆ ವಾಹನಗಳನ್ನು ನವೀಕರಣ ಕಾರ್ಯಗಳನ್ನು ಮಾಡಲಾಗಿದೆ. ಇನ್ನುಳಿದ 32 ವಾಹನಗಳ ನವೀಕರಣ ಕಾರ್ಯಗಳನ್ನು ಡಿಸೆಂಬರ್-2024ರೊಳಗಾಗಿ ಮುಕ್ತಾಯಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ನವೀಕರಣ ಮಾಡಲಾಗುವ ವಾಹನಗಳ ಹಳೆ ಕವಚವನ್ನು ಸಂಪೂರ್ಣ ತೆಗೆದು, ಹೊಸ ಕವಚವನ್ನು ಅಳವಡಿಸಲಾಗುವುದು.
ಹೊಸದಾಗಿ ಪ್ಯಾನೆಲಿಂಗ್, ಪ್ಲೊರಿಂಗ್, ವಿಂಡಶೀಲ್ಡ್ ಗ್ಲಾಸ್, ವಿಂಡೋ ಗ್ಲಾಸ್ ಮತ್ತು ಪ್ರಯಾಣಿಕರ ಆಸನಗಳನ್ನು ಹೊಸದಾಗಿ ಅಳವಡಿಸಲಾಗುವುದು. ಈ ಮೂಲಕ ಸಂಸ್ಥೆಯ ವ್ಯಾಪಿಯಲ್ಲಿ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ನಿರಂತರವಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾ.ಕ.ರ.ಸಾ.ಸಂಸ್ಥೆ ಪ್ರಕಟಣೆ ತಿಳಿಸಿದೆ.