ಬೆಂಗಳೂರು:- ಮೈಸೂರು ದಸರಾ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ಕೊಟ್ಟಿದೆ.
ದಸರಾ ಕಣ್ತುಂಬಿಕೊಳ್ಳಲು ರಾಜ್ಯದೆಲ್ಲೆಡೆಯಿಂದ ಆಗಮಿಸುವ ಪ್ರಯಾಣಿಕರಿಗಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿದೆ. ಸೆಪ್ಟೆಂಬರ್ 26,27 ಮತ್ತು 30 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆ, ಶಾಂತಿನಗರ ಬಸ್ ನಿಲ್ಧಾಣ ಸೇರಿದಂತೆ ಮೈಸೂರು ರಸ್ತೆ ನಿಲ್ದಾಣದಿಂದ ರಾಜ್ಯ ಮತ್ತು ಅಂತರಾಜ್ಯದ ಹಲವಾರು ಭಾಗಗಳಿಗೆ ಬಸ್ ಸಂಚಾರ ನಡೆಯಲಿದೆ. ಅಕ್ಟೋಬರ್ 2 ಮತ್ತು 5 ರಂದು ಈ ಬಸ್ಸುಗಳು ಬೆಂಗಳೂರಿಗೆ ಮರಳಲಿವೆ. ಈ ಬಗ್ಗೆ KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವಿಧ ಭಾಗದಿಂದ ದಸರಾಕ್ಕೆ ಬರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್ಸುಗಳ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರಿನ ಸುತ್ತಮುತ್ತಲಿರುವ ಪ್ರವಾಸಿ, ಪ್ರೇಕ್ಷಣೀಯ ಸ್ಥಾನಗಳಾದ ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ ಮತ್ತು ಚಾಮರಾಜನಗರದಂತ ತಾಣಗಳಿಗೆ ಇನ್ನೂ 350 ಬಸ್ಸುಗಳು ಸೇವೆ ಒದಗಿಸಲಿವೆ. ಹೀಗೆ ಮೈಸೂರಿಗೆ ಸೀಮಿತವಾಗಿಯೇ ಒಟ್ಟು 610 ವಿಶೇಷ ಬಸ್ಸುಗಳ ಸೌಲಭ್ಯ ನೀಡುವುದಾಗಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು,ಮಡಿಕೇರಿ, ಮಂಗಳೂರು, ಶಿವಮೊಗ್ಗ, ಕಾರವಾರ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಈ ಎಲ್ಲಾ ಸ್ಥಳಗಲ್ಲಿ ಸಂಚಾರ ನಡೆಸಲಿವೆ. ಕೇವಲ ಕರ್ನಾಟಕದೊಳಗೆ ಮಾತ್ರವಲ್ಲದೇ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಮುಂತಾದ ತಾಣಗಳಿಗೂ ಈ ಸೌಲಭ್ಯ ದೊರೆಯಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ಗಳನ್ನು ಸಹ KSRTC ವ್ಯವಸ್ಥೆ ಮಾಡಿದೆ. ಅದರಲ್ಲಿ “ಗಿರಿದರ್ಶಿನಿ’ ಪ್ರವಾಸ ಪ್ಯಾಕೇಜ್ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಬಹುದು. ಇದರಲ್ಲಿ ವಯಸ್ಕರಿಗೆ ರೂ. 450 ಮತ್ತು ಮಕ್ಕಳಿಗೆ ರೂ.300 ಶುಲ್ಕವಿರಲಿದೆ.