ವಿಜಯಸಾಕ್ಷಿ ಸುದ್ದಿ, ನರೇಗಲ್ಲ: 12ನೇ ಶತಮಾನದಲ್ಲಿ ರಚನೆಯಾದ ವಚನಗಳು ನಮ್ಮ ಜನರ ನಿರ್ಲಕ್ಷತೆಯಿಂದ ಹಾಳಾಗಿ ಹೋಗುತ್ತಿದ್ದ ಸಮಯದಲ್ಲಿ, ಮನೆಮನೆಗೆ ತೆರಳಿ ಅವುಗಳನ್ನು ಸಂಗ್ರಹಿಸಿದ ಶ್ರೇಯಸ್ಸು ಹಾನಗಲ್ಲ ಗುರು ಕುಮಾರೇಶ್ವರರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಉಳಿಸುವಲ್ಲಿ ಕುಮಾರೇಶ್ವರರ ಪಾತ್ರ ಮಹತ್ವದ್ದಾಗಿದೆ ಎಂದು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ನಡೆದ ಶ್ರೀ ಕುಮಾರೇಶ್ವರರ ಮಹಾರಥೋತ್ಸವದ ನಂತರ ನಡೆದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಿಡಗುಂದಿಕೊಪ್ಪದ ಮಠ ಕೇವಲ ಆಧ್ಯಾತ್ಮಿಕ ಸದ್ಗತಿಯನ್ನು ಒದಗಿಸುವಷ್ಟೇ ಅಲ್ಲದೆ ಭವರೋಗವನ್ನು ಕಳೆಯುವ ಮಹತ್ವದ ಮಠವಾಗಿದೆ. ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳು, ಶಿವಬಸವ ಮಹಾಸ್ವಾಮಿಗಳು ಹೇಗೆ ಭಕ್ತರ ರೋಗ ಕಳೆಯುವ ಕಾಯಕವನ್ನು ಕೈಗೊಂಡರೋ ಈಗಿನ ಶ್ರೀಗಳೂ ಸಹ ಅದೇ ಮಾರ್ಗದಲ್ಲಿ ಸಾಗಿದ್ದು, ಇಲ್ಲೊಂದು ಉತ್ತಮವಾದ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ತೆರೆಯುವ ಸಂಕಲ್ಪ ಮಾಡಿದ್ದಾರೆ. ಈ ಸಂಕಲ್ಪ ಈಡೇರುವಂತೆ ಗುರುಗಳು ಆಶೀರ್ವದಿಸಲಿ ಎಂದು ಹಾರೈಸುವದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಶ್ರೀಮಠದ ಸದ್ಭಕ್ತರು ಎಂದಿಗೂ ಯಾವ ಕೆಲಸಕ್ಕೂ ಹಿಂದೆ ಬಿದ್ದವರಲ್ಲ. ಈ ಸಾರೆ ನಾವು ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಹೇಳಿದಾಗ ಬೇರೆ ಯಾರ ಕಡೆಗೂ ಯಾವುದಕ್ಕೂ ನೋಡದೆ ಎಲ್ಲವನ್ನೂ ಹೆಗಲ ಮೇಲೆ ಹೊತ್ತು ಯಶಸ್ವಿಗೊಳಿಸಿದ್ದಾರೆ. ಅದೇ ರೀತಿ ಈ ಜಾತ್ರೆಯನ್ನೂ ಸಹ ಅಚ್ಚುಕಟ್ಟಾಗಿ ನೆರವೇರಿಸಿದ ಕೀರ್ತಿ ನಮ್ಮ ಶ್ರೀಮಠದ ಭಕ್ತರಿಗೆ ಸಲ್ಲುತ್ತದೆ. ಆದ್ದರಿಂದ ಎಲ್ಲ ಸದ್ಭಕ್ತರೂ ನಮ್ಮ ಶ್ರೀಮಠದ ದೊಡ್ಡ ಸಂಪತ್ತಾಗಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ವೇದಿಕೆಯ ಮೇಲೆ ಖೇಳಗಿ ಶ್ರೀಗಳು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಚಂದ್ರಶೇಖರ ದೇವರು, ಶರಣಪ್ಪ ಬೆಟಗೇರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಗೀತ ಬಳಗದವರಿಂದ ಸಂಗೀತ ಸೇವೆ ನಡೆಯಿತು. ವಿದ್ಯಾರ್ಥಿಗಳಿಂದ ನಡೆದ ಅಕ್ಕಮಹಾದೇವಿ ರೂಪಕವು ಭಕ್ತರ ಮನ ಸೆಳೆಯಿತು. ಜೀವನಸಾಬ ಬೂದಿಹಾಳ ಬಿನ್ನಾಳ ನಗೆಹಬ್ಬ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ರುದ್ರಪ್ಪ ಬೆಲ್ಲದ ಸ್ವಾಗತಿಸಿ ನಿರೂಪಿಸಿದರು.
ಹಾಲಕೆರೆಯ ಶ್ರೀಮಠ ಹಾಗೂ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರ ಮಠಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಮಠಗಳ ಮೆಲೆ ನಿಮ್ಮ ಶ್ರದ್ಧಾಭಕ್ತಿ ಒಂದೇ ರೀತಿಯಲ್ಲಿರಲಿ. ಇಲ್ಲಿ ಐದು ದಿನಗಳ ಕಾಲ ಅಭಿನವ ಅನ್ನದಾನ ಸ್ವಾಮಿಗಳ ಜೀವನ ದರ್ಶನವನ್ನು ಶ್ರೀಧರಗಡ್ಡೆಯ ಮರಿಕೊಟ್ಟೂರ ದೇವರು ಸುಂದರವಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೇಳಿರುವ ಅಂಶಗಳನ್ನು ಮನದಲ್ಲಿಟ್ಟುಕೊಂಡು ನೀವು ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬೇಕೆAದು ಶ್ರೀಗಳು ತಿಳಿಸಿದರು.