ಬೆಂಗಳೂರು: ಕುಣಿಗಲ್ ಸೊಸೈಟಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಶಾಸಕ ರಂಗನಾಥ್ ಅವರನ್ನು ತಕ್ಷಣ ಬಂಧಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಬಿಎ ಚುನಾವಣೆಯಲ್ಲಿ ಸರ್ಕಾರವೇ ಬ್ಯಾಲೆಟ್ ಪೇಪರ್ ಅಕ್ರಮಕ್ಕೆ ಕೈ ಹಾಕುತ್ತಿದೆ ಎಂದು ತೀವ್ರ ಆರೋಪಿಸಿದರು. ಕುಣಿಗಲ್ ಸಂತೆ ಮಾತೂರ್ನಲ್ಲಿ ನಡೆದ ಸೊಸೈಟಿ ಚುನಾವಣೆಯಲ್ಲಿ, ಅಧಿಕಾರಿಯೊಬ್ಬರು ಸ್ವತಃ ಬ್ಯಾಲೆಟ್ ಪೇಪರ್ನಲ್ಲಿ ಮತ ಚಲಾಯಿಸಿ ನಂತರ ಬಾಕ್ಸ್ಗೆ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
“ನಮ್ಮ ಏಜೆಂಟ್ ಆ ಅಧಿಕಾರಿಯನ್ನು ಹಿಡಿದುಕೊಟ್ಟಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸದೇ ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆಯೇ FIR ದಾಖಲಿಸಲಾಗಿದೆ. ಅಕ್ರಮ ಮಾಡಿದವರ ವಿರುದ್ಧ ಕ್ರಮವೇ ಇಲ್ಲ. ಇದು ಯಾವ ರೀತಿಯ ನ್ಯಾಯ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಮಾಲ್ಪ್ರಾಕ್ಟೀಸ್ ಸಾಮಾನ್ಯವಾಗಿದೆ ಎಂದು ಟೀಕಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ತಪ್ಪು ಆರೋಪದಲ್ಲಿ ಪ್ರಕರಣ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ರಂಗನಾಥ್ ಈ ಅಕ್ರಮದ ಹಿಂದೆ ಇದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಅವರು, “ತಕ್ಷಣ ಬಂಧನ ಮಾಡಬೇಕು. ಇಲ್ಲದಿದ್ದರೆ ಈ ವಿಷಯವನ್ನು ಸದನದಲ್ಲಿ ಎತ್ತಿ ರಾಜ್ಯ ಮಟ್ಟದಲ್ಲಿ ಬಹಿರಂಗ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.



