ಗಣಿತದ ಸುಲಭ ಕಲಿಕೆಗೆ ಪ್ರಯೋಗಾಲಯ ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿರುವ ನೂರಾರು ಮಾದರಿಗಳು ಕಬ್ಬಿಣದ ಕಡಲೆ ಎನಿಸಿಕೊಂಡಿರುವ ಗಣಿತ ವಿಷಯವನ್ನು ಅತ್ಯಂತ ಸುಲಭವಾಗಿ ಕಲಿಯಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ ಎಂದು ಅವ್ವ ಸೇವಾ ಟ್ರಸ್ಟ್ನ ನಿರ್ದೇಶಕರಾದ ಹೇಮಲತಾ ಬಸವರಾಜ ಹೊರಟ್ಟಿ ಹೇಳಿದರು.

Advertisement

ಅವರು ತಮ್ಮ ಸಹಕಾರದಿಂದ ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಗಣಿತ ಹಾಗೂ ಸಂಶೋಧನಾ ಪ್ರಯೋಗಾಲಯವನ್ನು ವೀಕ್ಷಣೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಎನಿಸಿಕೊಂಡಿರುವ ಈ ಗಣಿತ ಪ್ರಯೋಗಾಲಯ ಇಲ್ಲಿನ ಬಡ, ಮಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತದೆ. ಅವ್ವ ಸೇವಾ ಟ್ರಸ್ಟ್ ಇಲ್ಲಿಯವರೆಗೆ ಜನಪರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಮಾಡುತ್ತ ಬಂದಿದೆ. ಈ ಪ್ರಯೋಗಾಲಯಕ್ಕೂ ‘ಅವ್ವ ಸೇವಾ ಟ್ರಸ್ಟ್’ ನೆರವು ನೀಡಿದೆ.

ಪ್ರಯೋಗಾಲಯವು ಸಾಕಷ್ಟು ಸುಸಜ್ಜಿತವಾಗಿ ನಿರ್ಮಾಣಗೊಂಡು ನೂರಕ್ಕೂ ಹೆಚ್ಚು ಮಾದರಿಗಳನ್ನು ಹೊಂದಿದ್ದು ಖುಷಿ ತಂದಿದೆ. ಇಲ್ಲಿಯ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಂಡು ಗಣಿತದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಯ ಕೀರ್ತಿಯನ್ನು ಬೆಳೆಸುವಂತಾಗಲೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ, ಮುಂಬರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾವೆಲ್ಲ ಹೆಚ್ಚಿನ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ದತ್ತು ಉಸ್ತುವಾರಿಯಾದ ಡಾ. ಬಸವರಾಜ ಧಾರವಾಡ, ಡಿ.ಡಿ.ಪಿ.ಐ. ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟೆಪ್ಪನವರ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪುರ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ, ಶಂಕ್ರಮ್ಮ ಆರ್. ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಶಿಕಲಾ ಬಿ.ಗುಳೇದವರ, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾಪತಿ ಬಸವರಾಜ ಹೊರಟ್ಟಿಯವರು ಈ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿ ಹೇಮಲತಾ ಹೊರಟ್ಟಿಯವರೊಂದಿಗೆ ಗಣಿತ ಪ್ರಯೋಗಾಲಯ ವೀಕ್ಷಣೆ ಮಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲಾ ಹಂತದಲ್ಲಿ ಇಂಥದೊಂದು ಗಣಿತಕ್ಕೆ ಆದ ಪ್ರಯೋಗಾಲಯ ಇರುವುದು ಮೊದಲು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇದರ ಉಪಯೋಗವು ಈ ಶಾಲೆಯ ವಿದ್ಯಾರ್ಥಿಗಳಲ್ಲದೇ ಬೇರೆ ಶಾಲೆಯ ವಿದ್ಯಾರ್ಥಿಗಳಿಗೂ ಸಿಗುವಂತಾಗಲೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here