ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟಿಕೆ ಖಂಡಿಸಿ ಮತ್ತು ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ವಾಟಾಳ ನಾಗರಾಜ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆನೀಡಿದ್ದ ಕರ್ನಾಟಕ ಬಂದ್ಗೆ ಪಟ್ಟಣದಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬರದೇ ಎಂದಿನಂತೆ ವ್ಯಾಪಾರ-ವಹಿವಾಟು, ಜನಜೀವನ ಕಂಡು ಬಂದಿತು.
ಪಟ್ಟಣದ ಬಸ್ನಿಲ್ದಾಣ, ಮಾರುಕಟ್ಟೆ ಪ್ರದೇಶ, ಪಂಪ ವೃತ್ತ, ದರ್ಗಾ ರಸ್ತೆ ಹಾಗೂ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಶನಿವಾರ ಅಂಗಡಿ ಮುಂಗಟ್ಟುಗಳಲ್ಲಿ ಎಂದಿನಂತೆಯೇ ವ್ಯಾಪಾರ ವಹಿವಾಟು ನಡೆದಿತ್ತು. ಶಾಲಾ-ಕಾಲೇಜುಗಳ ರಜೆಯ ಬಗ್ಗೆ ಯಾವುದೇ ಘೋಷಣೆಯಿಲ್ಲದ್ದರಿಂದ ಮಕ್ಕಳು ಶನಿವಾರ ಮುಂಜಾನೆಯ ವೇಳೆ ಶಾಲೆಗೆ ಹೋಗಿ ಬಂದರು. ಬಸ್, ಆಟೋ, ಹೊಟೇಲ್ಗಳು ಬಂದ್ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸಂಚರಿಸಿದವು. ಜನಸಾಮಾನನ್ಯರಿಗೆ ಈ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ್ದದಿಂದ ಕರ್ನಾಟಕ ಬಂದ್ಗೆ ಸಂಬಂಧಿಸಿ ಲಕ್ಷ್ಮೇಶ್ವರದ ಜನಜೀವನ ಸಾಮಾನ್ಯವಾಗಿಯೇ ಇತ್ತು.
ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಗದಗ ಜಿಲ್ಲಾಧ್ಯಕ್ಷ ಶರಣು ಗೋಡಿ ಅವರನ್ನು ಸಂಪರ್ಕಿಸಲಾಗಿ, ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮತ್ತು ಪುಂಡಾಟಿಕೆಯ ವಿರುದ್ಧ ಹೋರಾಟ ನಿರಂತರ. ಹಿರಿಯ ಹೋರಾಟಗಾರಾದ ವಾಟಾಳ ನಾಗರಾಜ ಅವರ ಕನ್ನಡಪರ ಹೋರಾಟ ಶ್ಲಾಘನೀಯ. ಈಗಾಗಲೇ ಎಂಇಎಸ್ ಸಂಘಟನೆಯನ್ನು ರಾಜಕೀಯವಾಗಿ ಮೂಲೆಗುಂಪಾಗಿಸಲಾಗಿದೆ. ಕಾನೂನಾತ್ಮಕ ಹೋರಾಟ ನಿರಂತರವಾಗಿರಲಿದೆ. ಸರ್ಕಾರವೂ ಈ ಬಗ್ಗೆ ಸ್ಫಂದಿಸಿದ್ದು, ಕರ್ನಾಟಕ ಬಂದ್ಗೆ ಮಾತ್ರ ಬೆಂಬಲವಿರಲಿಲ್ಲ ಎಂದರು.