ಬೆಂಗಳೂರು: ಸಲೂನ್ ವಿಚಾರವಾಗಿ ಲೇಡಿ ಗ್ಯಾಂಗ್ವೊಂದು ಅಟ್ಟಹಾಸ ಮೆರೆದಿರುವಂತಹ ಘಟನೆ ನಗರದ ಭುವನೇಶ್ವರಿ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. ಹೌದು ಭುವನೇಶ್ವರಿ ನಗರ ಮುಖ್ಯರಸ್ತೆಯಲ್ಲಿರುವ ರಾಯಲ್ ಚಾಯ್ಸ್ ಸಲೂನ್ & ಸ್ಪಾನಲ್ಲಿದ್ದ ಸಂಜು (40) ಎಂಬಾತನನ್ನು ಅಪಹರಿಸಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಸ್ಮಿತಾ (32), ಕಾವ್ಯಾ (25) ಹಾಗೂ ಮೊಹಮ್ಮದ್ (40) ಬಂಧಿತ ಆರೋಪಿಗಳಾಗಿದ್ದು,
ಸ್ಮಿತಾ ಮಾಲೀಕತ್ವದ ಸಲೂನ್ನಲ್ಲಿ ಮ್ಯಾನೇಜರ್ ಆಗಿದ್ದ ಸಂಜು, ಇತ್ತೀಚೆಗೆ ಕೆಲಸ ಬಿಟ್ಟು ಸ್ನೇಹಿತನೊಂದಿಗೆ ಸೇರಿ ತಾನೇ ಹೊಸ ಸಲೂನ್ ಮತ್ತು ಸ್ಪಾ ಆರಂಭಿಸಿದ್ದರು. ಇದರಿಂದ ಆರೋಪಿಗಳು ಕೋಪಗೊಂಡಿದ್ದರು. ಮೇ 29ರಂದು ರಾತ್ರಿ 8 ಗಂಟೆ ಸುಮಾರಿಗೆ ಸಂಜು ಅವರ ಸಲೂನ್ & ಸ್ಪಾ ಬಳಿ ಬಂದಿದ್ದ ಆರೋಪಿಗಳು ಹಲ್ಲೆ ಮಾಡಿದ್ದರು.
ಬಳಿಕ ಬಲವಂತವಾಗಿ ಸಂಜು ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ದಾಸರಹಳ್ಳಿ ಮುಖ್ಯರಸ್ತೆ ಮುಖಾಂತರ ಜಕ್ಕೂರು ಕಡೆ ಕರೆದೊಯ್ದು, ಡ್ಯಾಗರ್, ಬಿಯರ್ ಬಾಟಲ್ನಿಂದ ಹೊಡೆದು ಹಲ್ಲೆಗೈದಿದ್ದರು. ಅಲ್ಲದೇ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ, ಅಮೃತ ನಗರದ ಶಾರದಾ ಸ್ಕೂಲ್ ಬಳಿ ಬಿಟ್ಟಿದ್ದರು. ನಂತರ ಸಂಜು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್, ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.