ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಪ.ಪಂ ವ್ಯಾಪ್ತಿಯ ಶೀತಾಲಹರಿ ಗ್ರಾಮದ ಗೌಡನಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗೆ ಚಾಲನೆ ನೀಡಿದ ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ಮಾತನಾಡಿ, ಪ.ಪಂ ವ್ಯಾಪ್ತಿಯ ಶೀತಾಲಹರಿ ಗ್ರಾಮದ ಗೌಡನಕೆರೆ ಅಭಿವೃದ್ಧಿಗೆ ಇಂದು ಚಾಲನೆ ನೀಡಲಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 2 ಕೋಟಿ ವೆಚ್ಚದಲ್ಲಿ ಮಲ್ಲಸಮುದ್ರ ಕೆರೆ, ಹುಲಕೋಟಿ ಕೆರೆ ಹಾಗೂ ಶೀತಾಲಹರಿ ಗೌಡನ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ ಅಂದಾಜು 40 ಲಕ್ಷ ವೆಚ್ಚದಲ್ಲಿ ಗೌಡನಕೆರೆಯ ಅಭಿವೃದ್ಧಿ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ರೈತಪರ ಯೋಜನೆಯನ್ನು ತಂದಿದ್ದು, ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕೆರೆಯ ಹೂಳು ಎತ್ತಿ, ಕೆರೆಯಲ್ಲಿ ಬೆಳೆದುನಿಂತ ಕಸ, ಕಂಟಿಗಳನ್ನ ತೆರವುಗೊಳಿಸಿ, ಕೆರೆಯ ರಸ್ತೆ ಪಕ್ಕದ ಭಾಗದಲ್ಲಿ 460 ಮೀ ತಂತಿ ಬೇಲಿಯನ್ನು ಅಳವಡಿಸುವ ಕಾಮಗಾರಿ ಇದಾಗಿದೆ. ಕೆರೆಯ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಲ್ಲಿ ಮನವಿ ಮಾಡಿದರು.
ಈ ವೇಳೆ ಹೊನ್ನಪ್ಪ ಜೋಗಿ, ಫಕ್ಕೀರಪ್ಪ ಜೋಗಿ, ರುದ್ರಪ್ಪ ಲಕ್ಷ್ಮಣಗೌಡ, ಮಲ್ಲೇಶ ನೀಲಗುಂದ, ವಿರೂಪಾಕ್ಷಪ್ಪ ನಾಯಕರ, ಮುತ್ತಪ್ಪ ಡೊಳ್ಳಿನ, ಯಲ್ಲಪ್ಪ ಕಲಾದಗಿ, ಗುತ್ತಿಗೆದಾರ ಆಕಾಶ ಸೇರಿದಂತೆ ಇತರರು ಇದ್ದರು.