ಗದಗ:- ಅಕ್ಟೋಬರ್ 12 ರಂದು ಲಾಠಿ ಚಾರ್ಜ್ ಮಾಡಿದ್ದ ಪಿಎಸ್ಐ ಅಮಾನತಿಗೆ ಒತ್ತಾಯಿಸಿ ಶ್ರೀರಾಮಸೇನೆ ಹಾಗೂ ಗೋಸಾವಿ ಸಮಾಜದಿಂದ ಇಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ಕೊಡಲಾಗಿದೆ.
ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಲಕ್ಷ್ಮೇಶ್ವರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಗದಗ ರಸ್ತೆಯಲ್ಲಿ ಶಹರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿಬಿ ಪಾಟೀಲ್ ನೇತೃತ್ವದಲ್ಲಿ ಸಂಪೂರ್ಣ ನಾಕಾಬಂದಿ ಇದ್ದು, ಲಕ್ಷ್ಮೇಶ್ವರ ರಸ್ತೆಯಲ್ಲಿ ಇಂಚಿಂಚೂ ಪರಿಶೀಲನೆ ಮಾಡುತ್ತಿದ್ದಾರೆ. ಶ್ರೀರಾಮ ಸೇನೆ ಹಾಗೂ ಕಾರ್ಯಕರ್ತರು ಲಕ್ಷ್ಮೇಶ್ವರಕ್ಕೆ ತೆರಳುವ ಶಂಕೆ ಹಿನ್ನೆಲೆ, ಸರ್ಕಾರಿ ಬಸ್, ಖಾಸಗಿ ವಾಹನಗಳನ್ನು ಖಾಕಿ ಪಡೆ ಪರಿಶೀಲಿಸಿದೆ.
ಅಲ್ಲದೇ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹೀಗಾಗಲೇ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. ಇನ್ನೂ ಮತ್ತೊಂದೆಡೆ ಬಂದ್ ಹಿನ್ನೆಲೆ 11 ಜನ ಶ್ರೀರಾಮ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಶಹರ ಪೊಲೀಸರಿಂದ 7 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಲಕ್ಷ್ಮೇಶ್ವರದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಅದರಂತೆ ಶ್ರೀರಾಮ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಸೋಮು ಗುಡಿ, ಜಿಲ್ಲಾ ಶಾರೀರಿಕ ಪ್ರಮುಖ ಹುಲಗಪ್ಪ ವಾಲ್ಮೀಕಿ, ಲಕ್ಶ್ಮೇಶ್ವರ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ, ಮಲ್ಲಿಕಾರ್ಜುನ ಹಾಳದೋಟರ, ಹಣಮಂತ ರಾಮಗಿರಿ, ಶರಣಪ್ಪ ಲಕ್ಕುಂಡಿ, ಮಂಜು ಗುಡಿ, ಮುತ್ತು ಭಜಂತ್ರಿ, ಸಂತೋಷ ಹಾದಿಮನಿ ಎಂಬುವವರ ವಶಕ್ಕೆ ಪಡೆಯಲಾಗಿದೆ.
ಇನ್ನೂ ಬಿಗುವಿನ ವಾತಾವರಣದ ನಡುವೆಯೂ ದೈನಂದಿನ ಕಾರ್ಯಚಟುವಟಿಕೆ, ಎಂದಿನಂತೆ ಸಾರಿಗೆ ಸಂಚಾರ ನಡೆಯುತ್ತಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರ ಪ್ರಯಾಣಕ್ಕೆ ಯಾವುದೇ ತೊಂದರೆ ಇಲ್ಲ. ಬಂದ್ ಗೆ ಕೆಲ ವರ್ತಕರು ಸೇರಿ ಹಲವು ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು ವ್ಯಾಪಾರ, ವಹಿವಾಟು ಕ್ಲೋಸ್ ಮಾಡಿದ್ದಾರೆ.
ಘಟನೆ ಹಿನ್ನೆಲೆ:
ಅಕ್ಟೋಬರ್ 12 ರಂದು ದಸರಾ ಮೆರವಣಿಗೆ ವೇಳೆ ಪಟ್ಟಣದ ಭಾನು ಮಾರ್ಕೆಟ್ ನಲ್ಲಿ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿತ್ತು. ಗಲಾಟೆಗೆ ಸಂಬಂಧಿಸಿ ಅನ್ಯ ಕೋಮಿನ ಯುವಕ ಗಲಾಟೆ ಆರಂಭಿಸಿದ್ದ ಅಂತ ಗೋಸಾವಿ ಸಮುದಾಯದ ಯುವಕರು ದೂರಿದರು. ದೂರಿನ ಆಧಾರದ ಮೇಲೆ ಅನ್ಯ ಕೋಮಿನ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ವಿಚಾರಣೆ ನಡೆಸ್ತಿದ್ದ ವೇಳೆಯೇ ಠಾಣೆ ಎದುರು ಗೋಸಾವಿ ಸಮಾಜದ ಯುವಕರು ಜಮಾವಣೆಗೊಂಡಿದ್ದರು. ಈ ವೇಳೆ ಗೋಸಾವಿ ಸಮಾಜದ ಯುವಕರ ಮೇಲೆ ಲಾಠಿ ಬೀಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಲಾಠಿ ಬೀಸಿದ್ದ ಪಿಎಸ್ ಐ ವಿರುದ್ಧ ರಸ್ತೆ ತಡೆದು ಯುವಕರು ಪ್ರತಿಭಟನೆ ಮಾಡಿದ್ದರು.
ಇದೀಗ PSI ಈರಪ್ಪ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಗೋಸಾವಿ ಸಮುದಾಯದ ಯುವಕರ ಪ್ರತಿಭಟನೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ಸಾಥ್ ಕೊಟ್ಟಿದ್ದಾರೆ.