ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಿವೇಶನ ರಹಿತರಿಗಾಗಿ ಗುರುತಿಸಲಾದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಾಗೆಯನ್ನು ಶೀಘ್ರದಲ್ಲಿ ಖರೀದಿಸಿ, ಆದಷ್ಟು ಶೀಘ್ರ ನಿವೇಶನ ಹಂಚಿಕೆಯನ್ನು ಮಾಡಲಾಗುವದು ಎಂದು ಪುರಸಭೆ ಹಿರಿಯ ಸದಸ್ಯ ರಾಜೀವ ಕುಂಬಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದ ತಮ್ಮಾ ತಿಮ್ಮಿ ಗುಡ್ಡದಲ್ಲಿ ಖರೀದಿಸಲಾದ 16 ಎಕರೆ 16 ಗುಂಟೆ ಜಮೀನಿಗೆ ಸಂಪರ್ಕ ರಸ್ತೆಗೆ ಬೇಕಾದ 9 ಗುಂಟೆ ಜಾಗವನ್ನು ಆದಷ್ಟು ಶೀಘ್ರ ಪುರಸಭೆಯಿಂದ ಖರೀದಿ ಮಾಡಲಾಗುವುದು. ತಮ್ಮಾ ತಿಮ್ಮಿ ಜಮೀನಿಗೆ ಸಂಪರ್ಕಕ್ಕೆ ಅವಶ್ಯವಿರುವ ರಸ್ತೆಗೆ 9 ಗುಂಟೆ ಜಾಗವನ್ನು ಜಮೀನು ಖರೀದಿ ವೇಳೆ ಹತ್ತಿರದ ಜಮೀನಿನವರು ಜಾಗವನ್ನು ಕೊಡುತ್ತೇವೆ ಅಂದ ಮೇಲೆ ಖರೀದಿ ಮಾಡಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದ, ಕೆಲ ಕಾನೂನು ತೊಡಕುಗಳಿಂದ, 9 ಗುಂಟೆ ಜಾಗ ಖರೀದಿ ಆಗಿರಲಿಲ್ಲ. ಇದೀಗ ಈ 9 ಗುಂಟೆ ಜಮೀನು ಖರೀದಿಸಿ ಫಲಾನುಭವಿಗಳಿಗೆ ನಿವೇಶನಕ್ಕೆ ಸಂಪರ್ಕ ಕಲ್ಪಿಸಲಾಗುವದು ಎಂದು ಹೇಳಿದ್ದಾರೆ.