ವಯನಾಡ್:– ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವುದು ಇದೇ ಮೊದಲೇನೂ ಅಲ್ಲ. 2020ರಲ್ಲಿ ಪುತ್ತುಮಲದಲ್ಲಿ ಸಂಭವಿಸಿದ ದುರಂತ ಇನ್ನೂ ಕಣ್ಮುಂದೆಯೇ ಇದೆ. ಇದೇ ಕಾರಣಕ್ಕೆ ವಯನಾಡು ಜಿಲ್ಲೆಯನ್ನು ವಿಪತ್ತು ವಲಯ ಎಂದೇ ಗುರುತಿಸಲಾಗಿದೆ. ಇದೀಗ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲಾ ಮತ್ತು ನೂಲ್ಪುಝಾ ಗ್ರಾಮದಲ್ಲಿ ಭೂಕುಸಿತ ಆಗಿದೆ.
ಮಳೆ ಮಿತಿ ಮೀರಿದಾಗ ಇಲ್ಲಿ ಭೂಕುಸಿತ ಸಂಭವಿಸೋದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ವಯನಾಡಿನ ಒಂದೆಲ್ಲ ಒಂದು ಪ್ರದೇಶ ಸಂಕಷ್ಟಕ್ಕೆ ಸಿಲುಕುತ್ತಿದೆ. ಹಾಗಾದರೆ ಭೂಕುಸಿತ ಹೇಗೆ ಸಂಭವಿಸುತ್ತದೆ? ಭೂಕುಸಿತಕ್ಕೆ ಜೋರು ಮಳೆ ಮಾತ್ರ ಕಾರಣನಾ? ಎಂಬ ಪ್ರಶ್ನೆ ಇದೆ.
ಸಿಯುಎಸ್ಟಿ ರಡಾರ್ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಂ.ಜಿ. ಮನೋಜ್ ಪ್ರಕಾರ.. ಭೂಕುಸಿತಕ್ಕೆ ಹಲವು ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಮಣ್ಣು ನೀರನ್ನು ಹೀರಿಕೊಳ್ಳುವ ಸೀಮಿತ ಸಾಮರ್ಥ್ಯವನ್ನು ಹೊಂದಿದೆ. ಅದೂ ಕೂಡ ಪ್ರತಿ ಮಣ್ಣಿನ ಗುಣಗಳ ಆಧಾರದ ಮೇಲೆ ನೀರನ್ನು ಹೀರಿಕೊಳ್ಳುವ ಶಕ್ತಿ ಇದೆ. ಅಂದರೆ ನೀರಿಗೆ ಸ್ವಲ್ಪ ಸಕ್ಕರೆ ಹಾಕಿದರೆ ಅದು ಕರಗುತ್ತದೆ. ನಿರಂತರವಾಗಿ ಸಕ್ಕರೆ ಹಾಕಿದರೆ ಅದು ಕರಗುವುದಿಲ್ಲ. ಮಣ್ಣಿನ ವಿಷಯದಲ್ಲೂ ಹಾಗೆಯೇ. ಸತತ ಮಳೆಯಾದರೆ ನೀರು ಇಂಗುವುದಿಲ್ಲ. ಮಿತಿ ಮೀರಿ ನೀರು ಬಂದರೆ ಅದು ಸ್ವೀಕರಿಸುವುದಿಲ್ಲ. ನೈಸರ್ಗಿಕ ವಿಕೋಪದಿಂದ ಅತಿಯಾದ ಮಳೆಯಾದರೆ ಪರ್ವತದ ತಪ್ಪಲಿನಲ್ಲಿ ಭೂಕುಸಿತ ಸಂಭವಿಸುತ್ತದೆ ಎನ್ನುತ್ತಾರೆ.
ಅದೇ ರೀತಿ ಇನ್ನೊಂದು ರೀತಿಯಲ್ಲಿ ಭೂಕುಸಿತ ಸಂಭವಿಸುತ್ತದೆ. ಮಣ್ಣಿನ ಒಳಗೆ ಸಂಭವಿಸುವ ಕೊಳವೆಗಳಿಂದಾಗಿ. ಅಂದರೆ ಇಲಿಗಳು ಕೊರೆಯುವ ಬಿಲದ ರೀತಿ. ಭೂಮಿಯೊಳಗೆ ಆಗಾಗ ನೀರನ ಸುರಂಗ ಕೂಡ ನಿರ್ಮಾಣ ಆಗುತ್ತದೆ. ಮಣ್ಣು ಸಡಿಲಗೊಂಡು ನೀರು ಹರಿಯಲು ಶುರುವಾಗುತ್ತದೆ. ಆದರೆ ಭೂಮಿಯ ಮೇಲ್ಭಾಗದಲ್ಲಿ ಮೇಲ್ನೋಟಕ್ಕೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ಅದು ಕ್ರಮೇಣ ನೀರಿನ ಹರಿವು ಹೆಚ್ಚಾಗಿ, ಮಣ್ಣು ಕೊಚ್ಚಿಹೋಗಿ ಜೋರಾಗಿ ಹರಿಯಲು ಶುರುವಾಗುತ್ತದೆ. ಹೀಗಾದಾಗ ಭೂಮಿಯ ಮೇಲ್ಮೈನ ಬೆಟ್ಟ ನಿಧಾನವಾಗಿ ಸಡಿಲಗೊಳ್ಳುತ್ತದೆ. ಕೊನೆಗೆ ಒಂದೇ ಏಟಿನಲ್ಲಿ ಭೂಮಿ ತಳಕ್ಕೆ ಕುಸಿಯುತ್ತದೆ.
ಇನ್ನೊಂದು ಮಾದರಿಯ ಭೂಕುಸಿತ ಹೇಗೆ ಸಂಭವಿಸುತ್ತದೆ ಅನ್ನೋದನ್ನೂ ಅವರು ವಿವರಿಸಿದ್ದಾರೆ. ಈಗಾಗಲೇ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಭೂಮಿ ಕುಸಿಯುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಒಮ್ಮೆ ಭೂಮಿ ಕುಸಿದಾಗ ಅಲ್ಲಿರುವ ಪ್ರದೇಶ ಛಿದ್ರಗೊಂಡಿರುತ್ತದೆ.
ಮಳೆಗಾಲ ನಿಂತು ಎಲ್ಲವೂ ಸರಿ ಹೋದಾಗ ಆ ಭೂಮಿ, ಬೆಟ್ಟ ಹಾಗೆಯೇ ಇರುತ್ತದೆ. ಮತ್ತೆ ಮಳೆಗಾಲ ಶುರುವಾಗಾಗ ಅಲ್ಲಿ ನಿಂತಿದ್ದ ಮಣ್ಣು ಮತ್ತೆ ಕೊಚ್ಚಿ ಹೋಗುತ್ತದೆ. ಇದರಿಂದ ಮತ್ತೆ ಆ ಬೆಟ್ಟ, ಗುಡ್ಡ ಸಡಿಲಗೊಳ್ಳುತ್ತದೆ. ಪರಿಣಾಮ ಈ ಹಿಂದೆ ಛಿದ್ರಗೊಂಡಿದ್ದ ಜಾಗದ ಅಕ್ಕಪಕ್ಕ ಗುಡ್ಡ ಕುಸಿತ ಸಂಭವಿಸುತ್ತದೆ ಎಂದು ಹೇಳಿದ್ದಾರೆ.