ವಿಜಯಸಾಕ್ಷಿ ಸುದ್ದಿ, ಗದಗ : ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುತ್ತಿದ್ದು, ತಾಯಂದಿರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಬುಧವಾರ ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ಗದಗ ರಾಜೀವ ಗಾಂಧಿ ನಗರದ ಅಂಗನವಾಡಿ 324ರಲ್ಲಿ ಜರುಗಿದ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಗದಗ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಕಮತ ಮಾತನಾಡಿ, ಪೌಷ್ಠಿಕ ಆಹಾರ ಸೇವನೆಯಿಂದ ಗರ್ಭಿಣಿ ಮಹಿಳೆಯರು ಆರೋಗ್ಯದಿಂದ ಇರುತ್ತಾರೆ. ಸತ್ವಯುತ ಆಹಾರ ಸೇವನೆ, ಸರಿಯಾದ ನಿದ್ರೆ, ಮಿತವಾದ ವ್ಯಾಯಾಮಗಳಿಂದ ಆರೋಗ್ಯ ಸದೃಢತೆ ಹೊಂದಬೇಕು ಎಂದರು.
ವಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ ಗುರುಬಸನಗೌಡ್ರ ಮಾತನಾಡಿ, ಹದಿಹರೆಯದವರ ಸಮಸ್ಯೆಗಳನ್ನು ಆ ಮಕ್ಕಳಿಂದ ಕೇಳಿ ತಿಳಿದು ಅವುಗಳಿಗೆ ಸೂಕ್ತ ಪರಿಹಾರ ತಿಳಿಸಬೇಕು ಎಂದರು.
ಪೋಷಣ ಅಭಿಯಾನದ ಗದಗ ತಾಲೂಕ ಸಂಯೋಜಕಿ ಕಾವೇರಿ ಚೇಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗರ್ಭಿಣಿ ಮಹಿಳೆಯರಾದ ಕಲ್ಪನಾ ಪಸಲಾದಿ ಹಾಗೂ ತಸ್ಲಿಂ ಮುಲ್ಲಾ ಅವರ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಸಹನಾ ಜೋಶಿ ಹಾಗೂ ಮಂಜುಳಾ ಹೂಗಾರ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಪಿಳ್ಳೆ ಸ್ವಾಗತಿಸಿದರು. ಶಕುಂತಲಾ ಪೂಜಾರ ನಿರೂಪಿಸಿದರು. ರತ್ನಾ ವಜ್ರೇಶ್ವರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯೆ ಕೆ.ಎ. ದಾವಲಖಾನ, ಬಾಲವಿಕಾಸ ಕಮಿಟಿಯ ಸುನೀಲ ಚಳಗೇರಿ, ದ್ರಾಕ್ಷಾಯಣಿ ಪನ್ನೂರ, ಮಾಲಾ ಪೆನಗೊಂಡ್ಲ, ಭಾಗ್ಯಾ ಮಂಟೂರ, ಜಯಲಕ್ಷ್ಮಿ ತಾಮ್ರಗುಂಡಿ, ಶಕೀಲ ವಾಲೇಕಾರ ಹಾಗೂ ಸರ್ಕಾರಿ ಉರ್ದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.