ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಭೀಷ್ಮ ವಿಹಾರಧಾಮದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ನೂತನವಾಗಿ ಪ್ರಾರಂಭಿಸಲಾದ ಸೋಲಾರ ಇಲೆಕ್ಟ್ರಿಕ್ ಬೋಟಿಂಗ್ ವ್ಯವಸ್ಥೆಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಶನಿವಾರ ಚಾಲನೆ ನೀಡಿ ಸೋಲಾರ್ ಇಲೆಕ್ಟಿçಕಲ್ ಬೋಟ್ನಲ್ಲಿ ಭೀಷ್ಮ ಕೆರೆಯ ವಿಹಾರ ನಡೆಸಿದರು.
ನಂತರ ಮಾತಾನಾಡಿದ ಸಚಿವರು, ರಾಜ್ಯದಲ್ಲಿಯೇ ಮೊದಲ ಸೋಲಾರ್ ಇಲೆಕ್ಟ್ರಿಕ್ ಬೋಟಿಂಗ್ ವ್ಯವಸ್ಥೆಯನ್ನು ಗದುಗಿನ ಭೀಷ್ಮ ವಿಹಾರ ಧಾಮದಲ್ಲಿ ಪ್ರಾರಂಭಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಸದ್ಯ ಪ್ರವಾಸಿಗರ ಅನುಕೂಲಕ್ಕಾಗಿ ಸೋಲಾರ್ ಇಲೆಕ್ಟ್ರಿಕ್ ಬೋಟ್ ಕಾರ್ಯನಿರ್ವಹಿಸತ್ತಿದ್ದು, ಸಧ್ಯದಲ್ಲೇ ಮತ್ತೆರಡು ಸೋಲಾರ್ ಬೋಟ್ಗಳು ಆಗಮಿಸಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ನಗರಸಭೆ ಸದಸ್ಯರು, ನಗರಸಭೆ ಆಯುಕ್ತರಾದ ರಾಜಾರಾಂ ಪವಾರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚೆಪ್ಪನವರ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.