ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿತು. ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಅಖ್ತರ್ ರಜಾ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಮತಯಾಚನೆ ಮಾಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ಬರು ನಾಯಕರಿಗೆ ಅಲ್ಪಸಂಖ್ಯಾತ ಮತದಾರರು ಭಾರೀ ಸ್ವಾಗತ ಕೋರಿದರು. ಸಿಎಂ ಕೈ ಬೀಸುತ್ತಿದ್ದಂತೆಯೇ ಜನರು ಉತ್ಸಾಹದಿಂದ ಕೂಗಾಟ, ಶಿಳ್ಳೆಗಳೊಂದಿಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ರಿಜ್ವಾನ್ ಅರ್ಷದ್, ಯಾಸೀರ್ ಖಾನ್ ಪಠಾಣ್, ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಬಲ್ಕೀಸ್ ಬಾನು ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು “ಅಸ್ಸಲಾಮು ಅಲೈಕುಮ್” ಎಂದು ಭಾಷಣ ಆರಂಭಿಸಿದ್ದು ಗಮನಸೆಳೆದಿತು. ಕಾರ್ಯಕ್ರಮದ ನಡುವೆ ಮಳೆ ಆರಂಭವಾದರೂ, ಸಿಎಂ ಸಿದ್ದರಾಮಯ್ಯ ಕೊಡೆ ಹಿಡಿದುಕೊಂಡೇ ಭಾಷಣ ಮುಂದುವರಿಸಿದರು.
ಹಗೆದಿಬ್ಬ ಸರ್ಕಲ್ನಿಂದ ಅಖ್ತರ್ ರಜಾ ವೃತ್ತದವರೆಗೆ ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಸಮರ್ಥ್ ಶಾಮನೂರು ಜೊತೆ ಭರ್ಜರಿ ರೋಡ್ಶೋ ನಡೆಸಿದರು. ಮೆಹಬೂಬ್ ನಗರ, ಮಿಲ್ಲತ್ ಕಾಲೋನಿ, ಮಂಡಕ್ಕಿ ಭಟ್ಟಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರಿ ಬೆಂಬಲ ಸೂಚಿಸಿದರು.
ಸಮರ್ಥ್ ಶಾಮನೂರು ನಮ್ಮ ಮನೆ ಮಗ ಎಂದು ಹೇಳಿದ ಸಿಎಂ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಬಡವರು, ದಲಿತರ ಪರ ನಿಲ್ಲುವ ಪಕ್ಷ ಎಂದು ಹೇಳಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ವಿವರಿಸಿದರು. ಗೃಹಲಕ್ಷ್ಮಿ, ಗೃಹಜ್ಯೋತಿ, ಉಚಿತ ಅಕ್ಕಿ ಹಾಗೂ ಉಚಿತ ಬಸ್ ಪ್ರಯಾಣ ಯೋಜನೆಗಳನ್ನು ಉಲ್ಲೇಖಿಸಿ, ಜನರ ಜೀವನ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದರು. ಒಟ್ಟಾರೆ, ದಾವಣಗೆರೆಯಲ್ಲಿ ನಡೆದ ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನವಾಗಿ ಗಮನ ಸೆಳೆಯಿತು.



