ವಿಜಯಸಾಕ್ಷಿ ಸುದ್ದಿ, ಗದಗ: ಟ್ಯಾಕ್ಸಿಡರ್ಮಿ ಸತ್ತ ಪ್ರಾಣಿಗಳಿಗೆ ಮರುಜೀವ ಕೊಡುವ ಕಲೆಯಾಗಿದ್ದು, ಈ ಕಲೆಯನ್ನು ಕಲಿಯಲು ವಿದ್ಯಾರ್ಥಿಗಳಲ್ಲಿ ತಾಳ್ಮೆ ಬೇಕು ಎಂದು ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದ ಟ್ಯಾಕ್ಸಿಡರ್ಮಿಸ್ಟ್ ನವೀನ ಪ್ಯಾಟಿಮನಿ ತಿಳಿಸಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಣಿಶಾಸ್ತç ವಿಭಾಗದಲ್ಲಿ `ಜೈವಿಕ ಮಾದರಿಗಳ ಸಂರಕ್ಷಣೆ ಮತ್ತು ಅವುಗಳನ್ನು ಸರಿಪಡಿಸುವುದು’ ವಿಷಯವಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಚಾರ್ಯರಾದ ಪಿ.ಜಿ. ಪಾಟೀಲ ಮಾತನಾಡಿ, ಮೊದಲಿನ ಕಾಲದಲ್ಲಿ ಹಸುಗಳು ತಮ್ಮ ಕರುಗಳು ಸತ್ತಾಗ ಹಾಲು ಕೊಡುತ್ತಿರಲ್ಲಿಲ್ಲ. ಆ ಸಮಯದಲ್ಲಿ ಟ್ಯಾಕ್ಸಿಡರ್ಮಿ ಕಲೆಯ ಮುಖಾಂತರ ಮರಿಗಳನ್ನು ಸಂರಕ್ಷಿಸಿ, ಹಸುಗಳ ಮುಂದೆ ಇಟ್ಟಾಗ ಅವು ಹಾಲು ಕೊಡುತ್ತಿದ್ದವು. ಸತ್ತ ಶವಗಳನ್ನು ಪಿರ್ಯಾಮಿಡಗಳಲ್ಲಿ ಸಂರಕ್ಷಿಸಿ ಇಡುತ್ತಿದ್ದರು. ಹಾಗಾಗಿ ಈ ಟ್ಯಾಕ್ಸಿಡರ್ಮಿ ಕಲೆಯು ಬಹಳ ವಿಶಿಷ್ಟವಾಗಿದ್ದು, ಈ ಕಲೆಯ ಮುಖಾಂತರ ಸಹಜವಾಗಿ ಸತ್ತ ಪ್ರಾಣಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡಬಹುದು. ವಿದ್ಯಾರ್ಥಿಗಳು ಈ ವೈಜ್ಞಾನಿಕ ಕೌಶಲ್ಯ ವಾದ ಟ್ಯಾಕ್ಸಿಡರ್ಮಿ ಕಲೆಯನ್ನು ಕಲಿತು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಹಜವಾಗಿ ಸತ್ತ ಪ್ರಾಣಿಗಳನ್ನು ಅರಣ್ಯ ಇಲಾಖೆಯ ಅನುಮತಿ ತೆಗೆದುಕೊಂಡು ಸಂರಕ್ಷಿಸಿ ಇಡಬೇಕೆಂದು ಹೇಳಿದರು.
ಕಾರ್ಯಾಗಾರದಲ್ಲಿ ಟ್ಯಾಕ್ಸಿಡರ್ಮಿಸ್ಟ್ ನವೀನ ಪ್ಯಾಟಿಮನಿ ಸಹಜವಾಗಿ ಸತ್ತ ಮೀನನ್ನು ಸಂರಕ್ಷಿಸುವುದು ಹೇಗೆ ಎಂದು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಆಯ್.ಕ್ಯೂ.ಎ.ಸಿಯ ಸಂಯೋಜಕರಾದ ಡಾ. ರಮೇಶ ಜಿ.ಕೆ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೀಣಾ ಎಮ್.ಎನ್, ಉಪನ್ಯಾಸಕರಾದ ಕಿರಣಕುಮಾರ, ಮಲ್ಲಪ್ಪಾ, ವಿದ್ಯಾ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಜೀವನದಲ್ಲಿ ಏನಾದರೂ ಮಾಡಬೇಕೆಂದರೆ ಮತ್ತು ಯಾವುದೇ ಕೌಶಲ್ಯವನ್ನು ಕಲಿಯಬೇಕೆಂದರೆ ತಾಳ್ಮೆ ಬಹಳ ಮುಖ್ಯ. ಅಂತೆಯೇ ಟ್ಯಾಕ್ಸಿಡರ್ಮಿ ಕಲೆಯು ಸತ್ತ ಪ್ರಾಣಿಗಳಿಗೆ ಮರುಜೀವ ಕೊಡುವ ಕಲೆಯಾಗಿದ್ದು, ಈ ಟ್ಯಾಕ್ಸಿಡರ್ಮಿ ಕಲೆಯ ಮುಖಾಂತರ ಸತ್ತ ಪ್ರಾಣಿಗಳನ್ನು ರಾಸಾಯನಿಕ ಉಪಯೋಗಿಸಿ ಸುಮಾರು 100ರಿಂದ 200 ವರ್ಷಗಳ ಕಾಲ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅಭ್ಯಸಿಸಲು ಹಾಗೂ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಇಡಬಹುದು. ಈ ಟ್ಯಾಕ್ಸಿಡರ್ಮಿ ಕಲೆಯನ್ನು ಕಲಿಯಬೇಕೆಂದರೆ ನಿಮ್ಮಲ್ಲಿ ತಾಳ್ಮೆ ಬಹಳ ಮುಖ್ಯ ಎಂದು ನವೀನ ಪ್ಯಾಟಿಮನಿ ತಿಳಿಸಿದರು.