ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಹೈದರಾಬಾದ್ ಕರ್ನಾಟಕದ ಶೈಕ್ಷಣಿಕ ಹೆಬ್ಬಾಗಿಲು ಎಂದೇ ಖ್ಯಾತವಾದ ನರೇಗಲ್ಲದ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಗಳಿಗೆ ಹಾಲಕೆರೆಯ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಮಾತೃ ಸಂಸ್ಥೆ. ಈ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ಒಟ್ಟು 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಸದ್ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ ಈ ಸಂಸ್ಥೆಯ ಉಚಿತ ಪ್ರಸಾದ ನಿಲಯದ ಸರ್ವೆ ನಂ: 410/2ಬಿ ಆಸ್ತಿಯಲ್ಲಿ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ. ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ 2019-2020ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದ್ದು ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಹೀಗೆ, ಉಚಿತ ಪ್ರಸಾದ ನಿಲಯಕ್ಕೆ ಸಿಗುವ ಜಾಗೆ ಕೇವಲ 3.87ಎಕರೆ ಎಂಬುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. 500 ವರ್ಷಗಳ ಇತಿಹಾಸ ಹೊಂದಿರುವ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠವು ಅಕ್ಷರದೊಂದಿಗೆ ಅನ್ನವನ್ನು ನೀಡುವ ಉದ್ದೇಶದಿಂದ ಲಿಂ. ಶ್ರೀ ಗುರು ಅನ್ನದಾನ ಸ್ವಾಮಿಗಳು ಕೋಡಿಕೊಪ್ಪದ ವೀರಪ್ಪಜ್ಜನವರ ಹಾಗೂ ಬಾಗಲಕೋಟೆಯ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯವನ್ನು ಕೋಡಿಕೊಪ್ಪದಲ್ಲಿ 1956ರಲ್ಲಿ ಪ್ರಾರಂಭಿಸಿದ್ದರು.
ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ 11.19 ಎಕರೆ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಹೇಗೆ ನಮೂದಾಗಿದೆ ಎಂದು ಭಕ್ತರು ಆತಂಕಗೊಂಡಿದ್ದಾರೆ.
ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳು ಈ ಪ್ರಕರಣದ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಆದರೆ, ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಈಗ ಮತ್ತೆ ಅದನ್ನು ಮುಂದುವರೆಸಲಾಗುತ್ತದೆ.
-ಮಲ್ಲಿಕಾರ್ಜುನಪ್ಪ ಮೆಣಸಿಗಿ.
ಉಚಿತ ಪ್ರಸಾದ ನಿಲಯದ ಚೇರಮನ್.ಶ್ರೀಮಠದ ಭಕ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಶ್ರೀಮಠದ ಆಸ್ತಿಯನ್ನು ಯಾವುದೇ ಕಾರಣಕ್ಕೂ ಪರಭಾರೆಯಾಗಲು ಬಿಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಜಿ.ಎಸ್. ಪಾಟೀಲ.
ಶಾಸಕರು, ಎಸ್ಎವಿವಿಪಿ ಸಮಿತಿ ಉಪಾಧ್ಯಕ್ಷರು.