ದೇವಿಹಾಳ ಗ್ರಾಮದ ಹೊರವಲಯದಲ್ಲಿ ಚಿರತೆ ಹೆಜ್ಜೆ ಗುರುತು: ಗ್ರಾಮಸ್ಥರಲ್ಲಿ ಚಿರತೆ ಭೀತಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಕಂಡುಬಂದಿದ್ದರಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ, ಕೆಲ ರೈತರಿಗೆ ಚಿರತೆ ಕಾಣಿಸಿಕೊಂಡಿರುವ ಸುದ್ದಿ ಹರಡಿರುವುದು ಇನ್ನಷ್ಟು ಭೀತಿ ಮೂಡಿಸಿದೆ.

Advertisement

ರಾತ್ರಿ ವೇಳೆಯಲ್ಲಿ ಗ್ರಾಮದ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡ ರೈತರ ಜಮೀನುಗಳಲ್ಲಿ ಚಿರತೆ ಸಂಚರಿಸಿದ್ದು, ಕೆಲ ರೈತರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಭಯಗೊಂಡ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರಣತೂರ ಗ್ರಾಮ ಪಂಚಾಯಿತಿ ವತಿಯಿಂದ ಡಂಗುರ ಸಾರಿ ಜನರಲ್ಲಿ ಎಚ್ಚರಿಕೆ ಮೂಡಿಸಲಾಗಿದೆ. ರೈತರು ಮತ್ತು ಸರ‍್ವಜನಿಕರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ಪ್ರದೇಶಕ್ಕೆ ತೆರಳಿ ಶೋಧ ಕರ‍್ಯ ನಡೆಸಿದ್ದು, ನಿಖರವಾದ ಚಿರತೆ ಹೆಜ್ಜೆ ಗುರುತು ಕಂಡುಬಂದಿವೆ.

ರೈತರು ಪ್ರತ್ಯಕ್ಷವಾಗಿ ಚಿರತೆಯನ್ನು ನೋಡಿದ್ದಾಗಿ ತಿಳಿಸಿದ್ದು, ಮತ್ತೆ ಅರಣ್ಯ ಪ್ರದೇಶದಲ್ಲಿಯೇ ಓಡಿ ಹೋಗಿರುವದಾಗಿ ಮಾಹಿತಿ ನೀಡಿದ್ದಾರೆ. ಪ್ರಾಣಿಗಳು ಓಡಾಡುವ ಎಲ್ಲ ಪ್ರದೇಶದಲ್ಲಿಯೂ ಅರಣ್ಯ ಇಲಾಖೆ ಶೋಧಕಾರ್ಯಚಾರಣೆ ನಡೆಸಿದ್ದು, ಸದ್ಯ ಜನತೆ ಭಯದ ವಾತಾವರಣದಲ್ಲೇ ಸಂಚರಿಸುತ್ತಿದ್ದು, ಹೊಲಕ್ಕೆ ತೆರಳಲು ಹಿಂಜರಿಯುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ಮೊನ್ನೆ ದೇವಿಹಾಳದ ಹತ್ತಿರ, ನಿನ್ನೆ ರಣತೂರ ಹತ್ತಿರ ಅರಣ್ಯ ಪ್ರದೇಶದ ಸುತ್ತ ಮುತ್ತ ಚಿರತೆ ಜಮೀನಿನಲ್ಲಿ ಹಾದು ಹೋದ ಬಗ್ಗೆ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಯಾವುದೇ ಅನಾಹುತಗಳು ಆಗಿಲ್ಲ. ಮಾಚೇನಹಳ್ಳಿ ಸಮೀಪ ಕರಡಿಯೊಂದು ಪ್ರತ್ಯಕ್ಷವಾಗಿರುವ ಬಗ್ಗೆ ರೈತರು ಹೇಳುತ್ತಿದ್ದಾರೆ. ಈ ಬಗ್ಗೆ ಗ್ರಾಮಗಳಲ್ಲಿ ಇಲಾಖೆ ವತಿಯಿಂದ ಡಂಗುರ ಸಾರಲಾಗಿದೆ. ರಾತ್ರಿ ವೇಳೆಯಲ್ಲಿ ರೈತರು ಜಾಗೃತರಾಗಿ ಸಂಚರಿಸಬೇಕು, ಪತ್ತೆಗೆ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here