ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನಾವೆಲ್ಲರೂ ಪ್ರಯತ್ನಿಸಬೇಕು. ಪ್ರತಿದಿನ ಮಗು ಶಾಲೆಗೆ ಬರುವಂತೆ ಮಾಡುವ ಜವಾಬ್ದಾರಿ ಶಿಕ್ಷಕರೊಂದಿಗೆ ಪಾಲಕರದ್ದೂ ಆಗಿದೆ. ಶಿಕ್ಷಣವು ಮಗುವಿನ ಹಕ್ಕಾಗಿದ್ದು, ಅದನ್ನು ಮಗುವಿಗೆ ಒದಗಿಸಲು ಮುಂದಾಗೋಣ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಸೋಮವಾರ ಗದುಗಿನ ಸರ್ಕಾರಿ ಶಾಲೆ ನಂ.11ರಲ್ಲಿ ನಡೆದ `ಭವ್ಯ ಭವಿಷ್ಯದ ನಾಳೆಗೆ-ಬನ್ನಿ; ಬನ್ನಿ ಶಾಲೆಗೆ ಚಿಣ್ಣರೇ’ ಕಾರ್ಯಕ್ರಮದಡಿಯಲ್ಲಿ ಅನಿಯಮಿತವಾಗಿ ಶಾಲೆಗೆ ಬರುತ್ತಿರುವ ಮಕ್ಕಳ ಮನೆ ಭೇಟಿ, ಪಾಲಕರಿಗೆ ತಿಳುವಳಿಕೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಉಚಿತ ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಷ್ಯವೇತನಗಳಂತಹ ಅನಕೂಲಗಳನ್ನು ಒದಗಿಸಿದೆ. ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪಾಲಕರು ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಿ ಅವರ ಶೈಕ್ಷಣಿಕ ಪ್ರಗತಿಗೆ ನಮ್ಮೊಂಗಿಗೆ ಕೈಜೋಡಿಸಬೇಕು ಎಂದರು.
ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.1ರ ಮುಖ್ಯೋಪಾಧ್ಯಾಯೆ ಎಸ್.ಎಸ್. ಬಿರಾದಾರ ಹಾಗೂ ಎಚ್.ಎಲ್. ಆಸಂಗಿ, ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ ಸಹ ಶಿಕ್ಷಕರಾದ ವಿಜಯಲಕ್ಷ್ಮೀ ಕುಂಟೋಜಿ ಎಫ್.ಎಸ್. ಹಿರೇಮಠ, ಸರ್ಕಾರಿ ಶಾಲೆ ನಂ.11ರ ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ ಹಾಗೂ ರೇಣುಕಾ ಹೊಸಮನಿ, ಮಂಜುಳಾ ಕೊಳ್ಳಿಯವರ ಪಾಲ್ಗೊಂಡು ಅನಿಯಮಿತ ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸುವಂತೆ ತಿಳಿಸಿದರು.
ರೂಪವ್ವ ಕಣವಿ, ಸೈನಾಜ ನದಾಫ್, ಲಕ್ಷ್ಮೀಬಾಯಿ ಕುಂತಿ, ಆಯೀಶಾ ಪಟೇಲ, ಹಮೀದಾಬಾನು ನದಾಫ್, ಚೆನ್ನಮ್ಮ ಸಂದಿಮನಿ, ಗೀತಾ ಗೌಡರ, ಅನಸೂಯಾ ಕವಲೂರ ಸೇರಿದಂತೆ ಪಾಲಕರು, ಎಸ್.ಡಿ.ಎಂ.ಸಿ ಸದಸ್ಯರು ಪಾಲ್ಗೊಂಡಿದ್ದರು.
ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ ಮಾತನಾಡಿ, ಮಕ್ಕಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅವಶ್ಯವಾಗಿದ್ದು, ಶಿಕ್ಷಣವು ಜೀವನವನ್ನು ಬೆಳಕಾಗಿಸಬಲ್ಲದೆಂಬುದನ್ನು ಪಾಲಕರು ಅರಿತು ಮಕ್ಕಳಿಗೆ ತಿಳಿಹೇಳಿ ಶಾಲೆಯತ್ತ ಮಕ್ಕಳ ಚಿತ್ತವನ್ನು ತಿರುಗಿಸಬೇಕು ಎಂದರು.