
ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸ್ಪರ್ಧಾತ್ಮಕ ತಂತ್ರಜ್ಞಾನ ಯುಗದಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಪೈಪೋಟಿಯನ್ನು ಸಮರ್ಥವಾಗಿ, ಸರಳವಾಗಿ, ನಾನು ಎದುರಿಸಬಲ್ಲೆ ಎಂಬ ದೃಢ ಆತ್ಮವಿಶ್ವಾಸವನ್ನು ತಮ್ಮಲ್ಲಿ ಮೂಡಿಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಸಾಹಿತಿ ಪದ್ಮಾ ಕಬಾಡಿ ಹೇಳಿದರು.
ಗದಗ ಜಿಲ್ಲಾ ಕದಳಿಶ್ರೀ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಗದುಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 11ರಲ್ಲಿ ಜರುಗಿದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮ ಮಾಲಿಕೆಯಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಾಗಪ್ಪ ತಂಬ್ರಳ್ಳಿ ಮಾತನಾಡಿ, ಶ್ರಾವಣ ಮಾಸದಲ್ಲಿ ಕದಳಿಶ್ರೀ ವೇದಿಕೆಯಿಂದ ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಅಮೃತಭೋಜನ ಜ್ಞಾನ ಸಿಂಚನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಬದುಕುವ ಉನ್ನತ ಧ್ಯೇಯದ ಮೆಟ್ಟಿಲುಗಳನ್ನು ತಿಳಿಸಿಕೊಡುತ್ತವೆ ಎಂದರು.
ಡಾ. ಮಹಾಂತೇಶ ಸಜ್ಜನರ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಮಕ್ಕಳು ಹಿರಿಯರ, ಶರಣರ ನುಡಿ ಹಾಗೂ ವಚನಗಳನ್ನು ಓದು-ಬರಹದಲ್ಲಿ ರೂಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ನಮ್ಮ ಮನಸ್ಸು ಎಂಬುದು ಒಂದು ಸುಂದರ ಉದ್ಯಾನವನದಂತೆ ಉತ್ತಮವಾದ ಸದ್ವಿಚಾರಗಳೇ ಬೀಜಗಳಾಗಿವೆ. ಇಲ್ಲಿ ಹೂವು ಬೆಳೆಯಬೇಕೊ ಕಸ ಬೆಳೆಯಬೇಕೋ ಎಂಬುದನ್ನು ನಾವೇ ನಿರ್ಧಸಿಸಬೇಕು ಎಂದರು.
ಆರಾಧ್ಯ ವೆಂಕಟಗಿರಿ, ನಿವೇದಿತಾ ಕಣವಿ ಪ್ರಾರ್ಥಿಸಿದರು. ಶ್ರೀನಿವಾಸ ಕಮ್ಮಾರ, ರಾಧಿಕಾ ಮಡಿವಾಳರ, ತನುಶ್ರೀ ಹಡಪದ ಶರಣರ ವಚನಗಳನ್ನು ಹಾಡಿದರು. ರೇಣುಕಾ ಹೊಸಮನಿ ಸ್ವಾಗತಿಸಿ ನಿರೂಪಿಸಿದರು. ಮಂಜುಳಾ ಕೊಳ್ಳಿಯವರ ವಂದಿಸಿರು. ಕಾರ್ಯಕ್ರಮದ ಪ್ರಾಯೋಜಕರಾದ ಪದ್ಮಾ ಕಬಾಡಿ, ಡಾ. ಮಹಾಂತೇಶ ಸಜ್ಜನರ ಅವರನ್ನು ಕದಳಿಶ್ರೀ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾನ್ವಿತರು. ಶಿಕ್ಷಕ ಸಮುದಾಯದೊಂದಿಗೆ ಆತ್ಮೀಯ ಸಂಬಂಧ ಹೊಂದಿ ತಾಯಿ-ಮಕ್ಕಳ ಬಾಂಧವ್ಯದೊಂದಿಗೆ ಇಲ್ಲಿ ಕಲಿಕೆಯಲ್ಲಿ ತೊಡಗುತ್ತಾರೆ. ಶಾಲೆಯು ಕುಟುಂಬದ ಪರಿಸರ ನಿರ್ಮಾಣದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.