ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಂಘಟನಾ ಶಕ್ತಿಯಿಂದ ನ್ಯಾಯಯುತವಾದ ಎಲ್ಲ ಬೇಕು-ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದ್ದು, ಬಿಡಿಯಾಗಿ ಬದುಕದೇ ಇಡಿಯಾಗಿ ಬದುಕುವ ಮನೋಧರ್ಮ ಎಲ್ಲರದ್ದಾಗಬೇಕು ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದು ಸರ್ಕಾರಿ ನೌಕರರು ಹತ್ತಾರು ಸಮಸ್ಯೆ, ಒತ್ತಡಗಳನ್ನು ಎದುರಿಸುತ್ತಿದ್ದು, ಅದಕ್ಕೆ ತಕ್ಕಂತೆ ನ್ಯಾಯಯುತವಾಗಿ ಸಿಗಬೇಕಾದ ಗೌರವ, ಸೌಲಭ್ಯಗಳನ್ನು ಪಡೆಯಲು ಜ್ಯಾತ್ಯಾತೀತ ಮತ್ತು ಸಹೋದರತ್ವ ಮನೋಭಾವದಿಂದ ಒಗ್ಗಟ್ಟಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ನೇತೃತ್ವ ವಹಿಸಿದ ಮುಖ್ಯಸ್ಥರ ಪಾತ್ರ ಮಹತ್ವದ್ದಾಗಿದೆ. ಎಲ್ಲರನ್ನೂ ಸ್ನೇಹ, ಪ್ರೀತಿ, ವಿಶ್ವಾಸ, ಸಹೋದರತ್ವ, ಸೌಹಾರ್ದತೆಯಿಂದ ಕಾಣಬೇಕು ಎಂದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ನೌಕರರು ಪರಸ್ಪರ ಸಮನ್ವಯತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ನೌಕರರ ಸಮಸ್ಯೆಗಳಿಗೆ ಸದಾಕಾಲ ಬೆಂಬಲಕ್ಕೆ ನಿಲ್ಲುತ್ತೇನೆ. ಸರ್ಕಾರದ ಮಟ್ಟದಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅವರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ನೌಕರರ ಭವನಕ್ಕೆ ಪಟ್ಟಣದಲ್ಲಿ ನಿವೇಶನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತಾಲೂಕಾ ಘಟಕದ ನೂತನ ಅಧ್ಯಕ್ಷ ಗುರುರಾಜ ಹವಳದ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯಕ, ಸಂಘದ ನಿಕಟಪೂರ್ವ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ ಮಾತನಾಡಿದರು. ಬಿಆರ್ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಬಸವರಾಜ ಬಳ್ಳಾರಿ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಡಾ. ಪ್ರವೀಣ ಸಜ್ಜನ, ಬಿ.ಎಸ್. ಹರ್ಲಾಪುರ, ಎಮ್.ಎ. ನದಾಫ್, ಜಿ.ಎಸ್. ಗುಡಗೇರಿ, ಎಸ್.ಬಿ. ಅಣ್ಣಿಗೇರಿ, ಬಸವರಾಜ ಯರಗುಪ್ಪಿ, ಚಂದ್ರಕಾಂತ ನೇಕಾರ, ಶಿಗ್ಗಾಂವ ಮತ್ತು ಸವಣೂರ ನೌಕರರ ಅಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆಯ ನೌಕರರು ಇದ್ದರು.
ತಾಲೂಕಾಧ್ಯಕ್ಷ ಗುರುರಾಜ ಹವಳದ ಸೇರಿ ಎಲ್ಲ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮತ್ತು ಕ್ಯಾಲೆಂಡರ್ ಬಿಡುಗಡೆ ನಡೆಯಿತು. ಎಚ್.ಡಿ. ನಿಂಗರಡ್ಡಿ ಮತ್ತು ಎಮ್.ಎನ್. ಹುಬ್ಬಳ್ಳಿ ನಿರೂಪಿಸಿದರು.
ಕರಾಸನೌ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಮಾತನಾಡಿ, ನೌಕರರ ಭರವಸೆಗಳನ್ನು, ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸರ್ಕಾರಿ ನೌಕರರ ಸಂಘ ಪ್ರಧಾನ ಪಾತ್ರ ವಹಿಸುತ್ತದೆ. ಸಂಘದಲ್ಲಿ ಕೆಲಸ ಮಾಡುವ ಎಲ್ಲಾ ಸದಸ್ಯರೂ ಸಂಘದ ಧ್ಯೇಯೋದ್ದೇಶಗಳಿಗೆ ಬೆಂಬಲ ನೀಡಬೇಕು. ಜತೆಗೆ ಎಲ್ಲಾ ನೌಕರರ ಆಶ್ವಾಸನೆಗಳ ಪೂರೈಕೆಗೆ ಪ್ರಯತ್ನಿಸಬೇಕು. ಅಂದಾಗಲೇ ಸಂಘಟನೆ ಬಲಾಢ್ಯವಾಗಿ ಬೆಳೆಯಲು ಸಾಧ್ಯ ಎಂದರು.



