ವಿಜಯಸಾಕ್ಷಿ ಸುದ್ದಿ, ಗದಗ: ಧ್ವನಿವರ್ಧಕ ಬಳಕೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು. ಆದರೆ, ಈ ಕಾನೂನು ಕೇವಲ ಹಿಂದೂಗಳ ಹಬ್ಬಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈದ್ ಮಿಲಾದ್ ಸಂದರ್ಭದಲ್ಲಿ ಮುಸ್ಲಿಂ ಸಂಘಟನೆಗಳು ಡಿಜೆ ಬಂದ್ ಮಾಡಿ ಸುಪ್ರಿಂಕೋರ್ಟ್ ಆದೇಶ ಪಾಲಿಸಿರುವುದು ಸಂತಸದ ವಿಚಾರ. ಆದರೆ, ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ನಿಯಮ ಪಾಲನೆಯಾಗಬಾರದು. ಪ್ರತಿನಿತ್ಯವೂ ಹಿಂದೂ ಮತ್ತು ಮುಸ್ಲಿಮರು ಸೇರಿದಂತೆ ಎಲ್ಲರೂ ಈ ಆದೇಶವನ್ನು ಪಾಲಿಸಬೇಕಿದೆ ಎಂದರು.
ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮೂರು ದಿನ ಬೆಳಗಿನ ಜಾವದವರೆಗೂ ಡಿಜೆ ಬಳಸಲಾಗಿತ್ತು. ಆದರೆ ಈಗ ಉಳಿದವರು ಡಿಜೆ ಬಳಸಲು ತಡೆ ನೀಡುವುದು ಸರಿಯಲ್ಲ. ಕರ್ನಾಟಕ ಸಂಭ್ರಮದ ವೇಳೆ ಬಳಸಿದ ಡಿಜೆ ಬಳಸಿದಾಗ ಎಷ್ಟು ಡೆಸಿಬಲ್ ಶಬ್ದ ಹೊರಹೊಮ್ಮಿತು ಎಂಬುದನ್ನು ನೋಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯ ನಂತರ ಬಳಸಬಾರದು ಎಂಬ ನಿಯಮವಿದ್ದರೂ, ಮಸೀದಿಗಳಲ್ಲಿ ಬೆಳಗಿನ ಜಾವ 3-4 ಗಂಟೆಗೆ ಅಜಾನ್ ಕೂಗಲಾಗುತ್ತದೆ. ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್ಪಿ ಕಚೇರಿ ಪಕ್ಕದಲ್ಲೇ ನ್ಯಾಯಾಲಯದ ಕಲಾಪಗಳು ನಡೆಯುವಾಗಲೂ ಅಜಾನ್ ಧ್ವನಿ ಕೇಳಿಸುತ್ತದೆ. ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲೂ ದಿನಕ್ಕೆ 5 ಬಾರಿ ಅಜಾನ್ ಕೂಗುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮುಸ್ಲಿಂ ಸಮಾಜದವರು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಖಾಸಗಿಯಾಗಿ ಡಿಜೆ ಬಳಸುವುದು ಬೇಡ ಎನ್ನುವ ನಿರ್ಣಯವನ್ನು ಬಹಿರಂಗವಾಗಿ ಹೇಳಿ, ನಮ್ಮ ಎಲ್ಲ ಹಬ್ಬಗಳನ್ನು ಹಾಳು ಮಾಡಿದ್ದಾರೆ. ರಾಜ್ಯ ಸರಕಾರ ಹಿಂದೂಗಳ ಹಬ್ಬವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಪೊಲೀಸರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ರಾಜಾರೋಷವಾಗಿ ಡಿಜೆ ಬಂದ್ ಮಾಡಿದ್ದಾರೆ. ಪೊಲೀಸರಿಗೆ ಧೈರ್ಯವಿದ್ದರೆ ಮಸೀದಿ ಮೇಲಿನ ಧ್ವನಿವರ್ಧಕ ಬಂದ್ ಮಾಡಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ರಾಜು ಡಮಾಮ, ರಾಚೋಟಿ ಕಾಡಪ್ಪನವರ, ಶಿವಯೋಗಿ ಹಿರೇಮಠ, ವಿಶ್ವನಾಥ ಶೀರಿ, ರಾಜು ಗದ್ದಿ, ಕಿರಣ ಹಿರೇಮಠ, ಮತ್ತು ವಿಶಾಲ ಗೋಕಾವಿ ಉಪಸ್ಥಿತರಿದ್ದರು.
ಸೆ. 19ರಂದು ನಡೆಯುವ ಈದ್ ಮಿಲಾದ್ ಆಚರಣೆಗೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ, ಹಿಂದೂ ಸಂಘಟನೆಗಳಿಂದ ಅದನ್ನು ತಡೆಯುವ ಪ್ರಯತ್ನ ಮಾಡುತ್ತೇವೆ. ಡಿಜೆ ಬಳಕೆಯಿಂದ 2 ಲಕ್ಷ ರೂ ಉಳಿತಾಯವಾಗಲಿದೆ ಎಂದ ಮುಸ್ಲಿಂ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಆ ಉಳಿತಾಯದ ಹಣ ಏನು ಮಾಡಿದರು ಎನ್ನುವ ಲೆಕ್ಕ ಕೊಡಬೇಕು.
– ರಾಜು ಖಾನಪ್ಪನವರ.
ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ.