ಪ್ರತಿಯೊಬ್ಬರೂ ಮುಕ್ತವಾಗಿ ಮತ ಚಲಾಯಿಸಿ : ದಿವ್ಯ ಪ್ರಭು

0
dwd dc
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವಿಪ್ ಸಮಿತಿಯು ವಿವಿಧ ಕಾರ್ಯಗಳ ಮೂಲಕ ನಿರಂತರವಾಗಿ ಪ್ರಯತ್ನಿಸುತ್ತಿದೆ.

Advertisement

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಬಹುತೇಕ ಅಧಿಕಾರಿ, ಸಿಬ್ಬಂದಿಗಳು ಕಳೆದ ಹಲವು ತಿಂಗಳಿಂದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಂಗಳವಾರ ಬೆಳಿಗ್ಗೆ ಧಾರವಾಡ ನಗರದ ಗೊಲ್ಲರ ಕಾಲೋನಿ, ಮೇದಾರ ಓಣಿ ಮುಂತಾದ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ, ಮತದಾರರಿಗೆ ವೋಟರ್ ಸ್ಲಿಪ್ ತಲುಪಿರುವ ಬಗ್ಗೆ ಖಚಿತಪಡಿಸಿಕೊಂಡರು.

ಗೊಲ್ಲರ ಓಣಿ ಮತದಾರರಾದ ಮನೆಗಳಲ್ಲಿನ ವೋಟರ್ ಸ್ಲಿಪ್ ಪರಿಶೀಲಿಸಿ, ಅವರೊಂದಿಗೆ ಮತದಾರ ಗುರುತಿನ ಪತ್ರ, ಮತಗಟ್ಟೆಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಯಾವುದೇ ಭಯ, ಆತಂಕಗಳಿಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿರುವ 1660 ಮತಗಟ್ಟೆಗಳಲ್ಲಿ ಇರುವ ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತೀ ಮತದಾರನಿಗೆ ವೋಟರ್ ಸ್ಲಿಪ್, ಪ್ರತೀ ಕುಟುಂಬಕ್ಕೆ ಮತದಾನ ಮಾಹಿತಿ ಇರುವ ಒಂದು ವೋಟರ್ ಗೈಡ್ ವಿತರಿಸುತ್ತಿದ್ದು, ಇದು ತಲುಪಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು.

ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ರಿಂದ 19 ವರ್ಷದೊಳಗಿನ ನವಯುವ ಮತದಾರರಿಗೆ ವೋಟರ್ ಸ್ಲಿಪ್‌ನೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ವಿಶೇಷವಾಗಿ ಶುಭಾಶಯ ಪತ್ರವನ್ನು ಸಹ ತಲುಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಿ, ನವ ಮತದಾರರನ್ನು ಮತದಾನಕ್ಕೆ ಬರುವಂತೆ ಪ್ರೇರಣೆ ನೀಡಿದರು.

ಪರ ಊರು, ಪರಸ್ಥಳಗಳಿಗೆ ತೆರಳಿರುವ ಮತ್ತು ಇತರ ಕಾರಣಗಳಿಂದ ಬಿಎಲ್‌ಓಗಳ ಸಂಪರ್ಕಕ್ಕೆ ಸಿಗದಿರುವ ಮತದಾರರಿಗೆ ಮತದಾನದ ದಿನದಂದು ಮತಗಟ್ಟೆ ವ್ಯಾಪ್ತಿಯ ನೂರು ಮೀಟರ್ ಒಳಗಡೆ ವೋಟರ್ ಹೆಲ್ಪ್ಡೆಸ್ಕ್ ತೆರೆದು, ಮತದಾರರಿಗೆ ವೋಟರ್ ಸ್ಲಿಪ್, ಮತದಾನ ಮಾಡುವ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದರು.

ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಕುರಿತು ಖುದ್ದು ಪರಿಶೀಲಿಸಬಹುದು. ಮತದಾರ ಸಹಾಯವಾಣಿ 1950ಗೆ ಕರೆ ಮಾಡಿ, ತಿಳಿಯಬಹುದು. ಹಾಗೂ voters.eci.gov.in ದಲ್ಲಿ ceo.karnataka.gov.in ದಲ್ಲಿಯೂ ಪರಿಶೀಲಿಸಬಹುದು. ಮತದಾರ ತನ್ನ ಮತ ಚಲಾಯಿಸಲು ಸಂಬಂಧಪಟ್ಟ ಮತಗಟ್ಟೆಯ ಮತದಾರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಮತದಾರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವಕಾಶ ಸಿಗುವದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here