ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೀದಿ ವ್ಯಾಪಾರಸ್ಥರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಉತ್ತಮ ಆರೋಗ್ಯದ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ನ್ಯಾಯವಾದಿ ಉಮೇಶ ಸಂಗನಾಳಮಠ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪಟ್ಟಣ ಪಂಚಾಯಿತಿ ಕಾರ್ಯಾಲಯಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಿಎಂ ಸ್ವನಿಧಿ ಶಿಬಿರ ಹಾಗೂ 8 ಕಲ್ಯಾಣ ಯೋಜನೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಪ.ಪಂನಿಂದ ಗುರುತಿನ ಚೀಟಿ ಹಾಗೂ ವ್ಯಾಪಾರ ಮಾರಾಟ ಪತ್ರವನ್ನು ಪಡೆಯಬೇಕು. ನಿಮ್ಮ ಎಲ್ಲ ದಾಖಲೆಗಳನ್ನು ಪ.ಪಂಗೆ ನೀಡಿ ಸರ್ಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಸುಪ್ರೀಂಕೋರ್ಟ್ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ 2014 ಜಾರಿಗೆ ತಂದಿದ್ದು, ಈ ಕಾಯ್ದೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿದೆ. ಇದು ಅಧಿಕಾರಿಗಳಷ್ಟೇ ಅಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಎದುರಾಗುವ ತೊಂದರೆ ನಿವಾರಿಸಲು ಸಹಕಾರಿಯಾಗಿದೆ ಎಂದರು.
ಗದಗ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಿಕಂದರ ಆರಿ ಕಾನೂನು ಅರಿವು ಬಗ್ಗೆ ಉಪನ್ಯಾಸ ನೀಡಿದರು. ಬೀದಿ ಬದಿ ವ್ಯಾಪಾರಸ್ಥರಿಗೆ ಆರೋಗ್ಯ ತಪಾಸಣೆ, ಸಾಲ ಮೇಳ ಮತ್ತು ಡಿಜಿಟಲ್ ಆಪ್ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ಬ್ಯಾಂಕ್ ಸಾಲವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡಿದ 5 ಜನ ವ್ಯಾಪಾರಸ್ಥರಿಗೆ ಸನ್ಮಾನ ಜರುಗಿತು.
ಈವೇಳೆ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಮಲ್ಲಿಕಸಾಬ ರೋಣದ, ಶ್ರೀಶೈಲಪ್ಪ ಬಂಡಿಹಾಳ, ಈರಪ್ಪ ಜೋಗಿ, ವಿಜಯಲಕ್ಷ್ಮೀ ಚಲವಾದಿ, ಅಕ್ಕಮ್ಮ ಮಣ್ಣೊಡ್ಡರ, ಕಳಕನಗೌಡ ಪೊಲೀಸ್ಪಾಟೀಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಗೋಡಿ, ಸಕ್ರಪ್ಪ ಹಡಪದ, ಬೀದಿ ಬದಿ ವ್ಯಾಪಾರಸ್ಥರಾದ ಶಿವಾನಂದ ಪದ್ಮಸಾಲಿ, ಮೆಹಬೂಬಸಾಬ ಹೊಸಮನಿ, ದೇವಕ್ಕ ರಾಠೋಡ, ಬೀಬಿಜಾನ ಸರ್ಕವಾಸ, ಶರಣಪ್ಪ ಕಲಾಲಬಂಡಿ, ಪ.ಪಂ ಸಿಬ್ಬಂದಿಗಳಾದ ವೆಂಕಟೇಶ ಮಡಿವಾಳರ, ಎಂ.ಎಚ್. ಸೀತಿಮನಿ, ಶಂಕ್ರಪ್ಪ ದೊಡ್ಡಣ್ಣವರ, ಕಾವ್ಯಾ ಅರವಟಗಿಮಠ, ಸಂಜೀವ ಗುಡಿಮನಿ, ಉದಯ ಮುದೇನಗುಡಿ ಸೇರಿದಂತೆ ಇತರರು ಇದ್ದರು. ಆರೀಫ್ ಮಿರ್ಜಾ ನಿರ್ವಹಿಸಿದರು.
ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಲು ಪ್ರಧಾನಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ಬೀಮಾ, ಶ್ರಮಯೋಗಿ ಧನ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಪ್ರಧಾನಮಂತ್ರಿ ಜನಧನ್ ಯೋಜನೆ, ಲೇಬರ್ ಕಾರ್ಡ್, ಜನನಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಮಾತೃ ವಂದಾನ ಯೋಜನೆ, ಪಿಎಂ ಸ್ವನಿಧಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪಾರಂಪರಿಕವಾಗಿ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದರು.