ವಿಜಯಸಾಕ್ಷಿ ಸುದ್ದಿ, ಗದಗ: ಜಿಮ್ಸ್ ಆಸ್ಪತ್ರೆ ಸೇವೆಯಲ್ಲಿ ಶ್ರೇಷ್ಠ ಆಸ್ಪತ್ರೆಯಾಗಲಿ. ಇಲ್ಲಿ ಅತ್ಯುನ್ನತ ಸೇವೆಗಳು ಸರಳವಾಗಿ ಸಿಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ವೈದ್ಯಕೀಯ ಶಿಕ್ಷಣ ಇಲಾಖೆ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೂತನ ಕ್ಯಾಥಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಮ್ಸ್ ಆರಂಭವಾಗಿ 10 ವರ್ಷ ಪೂರ್ಣಗೊಳಿಸಿದೆ. ಇಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿದ್ದೇವೆ. 185 ಕೋಟಿ ರೂ ವೆಚ್ಚದ ಕಾಲೇಜು ಕಟ್ಟಡ ನಿರ್ಮಾಣ ಆಗಿದೆ. ಒಟ್ಟಾರೆ 366 ಕೋಟಿ ರೂ ಖರ್ಚು ಮಾಡಿದ್ದೇವೆ. 10 ಕೋಟಿ ವೆಚ್ಚದಲ್ಲಿ ಕ್ಯಾಥ್ಲ್ಯಾಬ್ ಮಾಡಿದ್ದು, ಬಡವರಿಗೆ ಹೆಚ್ಚು ಅನುಕೂಲ ಆಗಲಿ ಎಂದರು.
ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಪ್ರಾಸ್ತಾವಿಕ ಮಾತನಾಡಿ, ಈ ಕ್ಯಾಥ್ ಲ್ಯಾಬ್ ಸಚಿವ ಎಚ್.ಕೆ. ಪಾಟೀಲರ ಕನಸಿನ ಕೂಸಾಗಿದ್ದು, 2018ರ ಆಯ-ವ್ಯಯದಲ್ಲಿ ಕ್ಯಾಥ್ಲ್ಯಾಬ್ ಘೋಷಣೆಯಾಯಿತು. ವರ್ಷದ ಹಿಂದೆ ಸಿಎಂ ಅವರು ಶಂಕುಸ್ಥಾಪನೆ ಮಾಡಿದ್ದು, ಇಂದು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಹೃದಯ ಸಂಬಂಧಿ ಕಾಯಿಲೆಗೆ ಇಲ್ಲಿ ಉನ್ನತ ತಂತ್ರಜ್ಞಾನ ಹೊಂದಿದ ಯಂತ್ರಗಳಿದ್ದು, ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಇದೆ. ಹೃದಯದ ಕೆಲಸವನ್ನು ಹೃದಯದಿಂದ ಮಾಡು ಎಂಬ ಈ ವರ್ಷದ ಘೋಷವಾಕ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದವರು ಸಚಿವರಾದ ಎಚ್.ಕೆ. ಪಾಟೀಲರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಮ್ಸ್ ಬಿ.ಎಸ್.ಇ ನರ್ಸಿಂಗ್ ವಿದ್ಯಾರ್ಥಿಗಳು `ನಿಮ್ಮ ಹೃದಯ ನಿಮ್ಮ ಕೈಯಲ್ಲಿ’ ಎಂಬ ಕಿರುನಾಟಕ ಪ್ರದರ್ಶಿಸಿ, ನಾಟಕದಲ್ಲಿ ಧೂಮಪಾನ, ಮದ್ಯಪಾನ, ಜಂಕ್ ಪುಡ್, ಗುಟಕಾ ಜಗಿಯುವದು ಆರೋಗ್ಯಕ್ಕೆ ಹಾನಿಕರ, ಇದರಿಂದ ನಿಮ್ಮ ಜೀವನವೇ ಸರ್ವನಾಶ ಆಗಬಹುದು ಎಂಬ ಸಂದೇಶ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಸುಂಡಿ ಗ್ರಾ.ಪಂ ಅಧ್ಯಕ್ಷ ಅಲ್ತಾಫ್ ಕಾಗದಗಾರ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ರೇಖಾ ಎಸ್.ಸೋನಾವನೆ, ಪ್ರಾಂಶುಪಾಲ ಡಾ. ರಾಜು ಜಿ.ಎಮ್, ಆರ್ಥಿಕ ಸಲಹೆಗಾರ ಪ್ರಶಾಂತ ಜೆ.ಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಬಿ.ಸಿ. ಕರಿಗೌಡರ ಹಾಜರಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಈ ದಿನ ಮೆಡಿಕಲ್ ಕಾಲೇಜು ಇತಿಹಾಸದಲ್ಲಿ ನೆನಪಿಡುವಂತಿದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದ್ದು, ಈ ಭಾಗದ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ ಎಂದರು.
ಗದುಗಿನಲ್ಲಿ ಮಾನವ ಸಂಪನ್ಮೂಲ ಸಕಾಲಕ್ಕೆ ಸೇವೆ ಒದಗಿಸಲು ಮುಂದಾಗಬೇಕು. ನಾವು ಇಲ್ಲಿಂದ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಗದಗ ಜನರನ್ನು ಕರೆದುಕೊಂಡು ಹೋಗಿ ಬಂದಿದ್ದೇವೆ. ಅಲ್ಲಿನ ಮಾನವೀಯ ಸೇವೆಯ ಗೌರವ ಇಲ್ಲಿನ ಜಿಮ್ಸ್ನಲ್ಲಿ ಲಭ್ಯವಾಗಬೇಕು ಎಂದು ಜಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.