ವಿಜಯಸಾಕ್ಷಿ ಸುದ್ದಿ, ಗದಗ: ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುತ್ತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನತೆಯಲ್ಲಿ ಅಚ್ಚಳಿಯದೇ 16ನೇ ವಾರ್ಡಿನ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಉಳಿದಿದ್ದಾರೆ. ಇಂತಹ ನಾಯಕರು ನಗರಸಭೆಯ ಅಧ್ಯಕ್ಷರಾಗಲಿ ಎಂದು ಯುವ ಮುಖಂಡ ವಿನಾಯಕ ಪರಾಪೂರ ಆಗ್ರಹಿಸಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನತೆಯ ಅಪೇಕ್ಷೆ ಮೇರೆಗೆ ತಮ್ಮ ನಿಸ್ವಾರ್ಥ ಸೇವೆಯಿಂದಲೇ 2002ರಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಅಂದು ಪ್ರಬಲವಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿ ನಗರಸಭೆಗೆ ಆಯ್ಕೆಯಾದರು. ನಂತರ ಡಿ.ಆರ್. ಪಾಟೀಲ್ ಹಾಗೂ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಎಪಿಎಂಸಿ ಸದಸ್ಯರಾಗಿ ಸೇವೆ ಸಲ್ಲಿಸಿ, ತಾನೊಬ್ಬ ರೈತಪರ ನಾಯಕ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇವರ ಈ ಎಲ್ಲ ಯಶಸ್ಸಿನ ಹಿಂದೆ ಡಿ.ಆರ್. ಪಾಟೀಲ ಮತ್ತು ಎಚ್.ಕೆ. ಪಾಟೀಲರು ಇದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.