ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಸ್ವಾಭಿಮಾನ, ಹೋರಾಟ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ತಹಸೀಲ್ದಾರ ಬಿ.ವಿ. ಗಿರೀಶ್ ಬಾಬು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಅವರಂತಹ ಸಾಧಕರ ಜೀವನ ಚರಿತ್ರೆಯ ಬಗ್ಗೆ ಭವಿಷ್ಯದ ಪೀಳಿಗೆಗೆ ತಿಳಿಸುವುದೇ ಜಯಂತಿ ಆಚರಣೆಗಳ ಮೂಲ ಉದ್ದೇಶವಾಗಿದೆ. ಸಮಾಜದಲ್ಲಿ ಜಾತಿ-ಮತ-ಪಂಥಗಳ ನಡುವೆ ತಾರತಮ್ಯಗಳು ಹೆಚ್ಚಾಗುತ್ತಿದ್ದು, ಜನರು ಜಾತಿ ವ್ಯವಸ್ಥೆಯಿಂದ ಹೊರಬಂದು, ಉತ್ತಮ ಮಾರ್ಗದಲ್ಲಿ ಬದುಕು ನಡೆಸಿದರೆ ದೇಶ ಸುಂದರ, ಸಮೃದ್ಧವಾಗುತ್ತದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷ ಪಾಟೀಲ ಬೆಟ್ಟನಗೌಡ, ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರು ಕೇವಲ ಒಂದು ಸಮಾಜಕ್ಕಾಗಿ ಹೋರಾಟ ಮಾಡಿದವರಲ್ಲ. ಅವರು ಸರ್ವಜನಾಂಗಕ್ಕೂ ಮೀಸಲಾದವರು. ರಾಣಿ ಚೆನ್ನಮ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಈ ವೇಳೆ ಇಓ ಚಂದ್ರಶೇಖರ ವೈ.ಹೆಚ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಬಿಇಓ ಹೆಚ್. ಲೇಪಾಕ್ಷಪ್ಪ, ಸಮಾಜ ಕಲ್ಯಾಣಾಧಿಕಾರಿ ಭೀಮಪ್ಪ, ಸಮಾಜದ ಮುಖಂಡರಾದ ಪ್ರಭಾಕರ್, ಚನ್ನಬಸವನಗೌಡ, ಮತ್ತಿಹಳ್ಳಿ ಪ್ರಕಾಶ್, ಪಂಪಣ್ಣ ಅರಸೀಕೆರೆ, ಅಡವಳ್ಳಿ ಮಂಜುನಾಥ, ಶ್ರೀಮತಿ ಕೊಟ್ರೇಶ, ಉಮಾಮಹೇಶ್ವರಿ, ಎನ್.ಜಿ. ಸಿದ್ದೇಶ್, ಸುರೇಶ್, ಬಸವರಾಜ್ ಮುಲಾಲಿ ಅಲಮಸೀಕೆರೆ, ಬಸವರಾಜ್ ಗೌರಿಹಳ್ಳಿ, ಮಹೇಶ್ ಪೂಜಾರ್, ಕಲ್ಲನಗೌಡ ಹಾರಕನಾಳು ಮುಂತಾದವರಿದ್ದರು.