ವಿಜಯಸಾಕ್ಷಿ ಸುದ್ದಿ, ಗದಗ: ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಕುಟುಂಬದವರನ್ನು ಒಂದುಗೂಡಿಸಿ ಸಮಾಜ ಹಾಗೂ ಸಂಘಟನೆಯನ್ನು ಬಲಿಷ್ಠಗೊಳಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ ಕಲ್ಯಾಣಶೆಟ್ಟರ ಹೇಳಿದರು.
ನಗರದ ಪಂ. ಭೀಮಸೇನ್ ಜೋಶಿ ರಂಗ ಮಂದಿರದಲ್ಲಿ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘದ 2025ನೇ ಸಾಲಿನ ತೂಗು ಪಂಚಾಂಗ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲಸ-ಕಾರ್ಯದಲ್ಲಿ ತೊಡಗಿರುವ ನಮ್ಮ ಸಮಾಜದ ನೌಕರರು ಒತ್ತಡದ ಜೀವನದ ನಡುವೆ ಎಲ್ಲ ಕುಟುಂಬದವನ್ನು ಒಂದೇ ವೇದಿಕೆಯ ಅಡಿಯಲ್ಲಿ ಅಣಿಗೊಳಿಸಿ ಸಂಸ್ಕಾರ ಮತ್ತು ಸಂಘಟನೆಯೊಂದಿಗೆ ಸದೃಢ ಸಮಾಜ ಕಟ್ಟೋಣ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾಜ್ಯೋತ್ಸವ ಪುರಸ್ಕೃತ ಹಾಗೂ ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವಿಭಕ್ತ ಕುಟುಂಬ, ತಂದೆ-ತಾಯಿ, ಅಕ್ಕ-ತಂಗಿ, ಸಂಸ್ಕಾರಗಳ ಕುರಿತು ಮನಮುಟ್ಟವ ಹಾಗೆ ವಿವರಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಅಡ್ನೂರು-ರಾಜೂರು-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಉಚಿತವಾಗಿ ಲಿಂಗಧಾರಣೆ ಮೂಲಕ ಮಕ್ಕಳಲ್ಲಿ ಶಿಕ್ಷಣ, ಸಂಸ್ಕಾರ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಹೆಸ್ಕಾಂ (ಹಣಕಾಸು) ನಿಗಮ ಕಾರ್ಯಾಲಯದ ನಿರ್ದೇಶಕ ಪ್ರಕಾಶ ಪಾಟೀಲ, ಹುಬ್ಬಳ್ಳಿಯ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ವಿರೇಶಕುಮಾರ ಹೆಬ್ಬಾಳ, ಅತಿಥಿಗಳಾಗಿ ರೋಣದ ಕಾರ್ಯನಿರ್ವಾಹಕ ಅಭಿಯಂತರ ವಿ.ಟಿ. ರಾಜೂರ, ಗದಗ ಜಾಗೃತ ದಳದ ಎಇಇ ಐ.ಎಸ್. ಜವಳಿ, ಕೇಂದ್ರ ಸಮಿತಿ ಸದಸ್ಯ ಎನ್.ಎಫ್. ಅಸೂಟಿ, ಖಜಾಂಚಿ ಸಂಗಮೇಶ ನೇಗೂರ, ಸದಸ್ಯರಾದ ಐ.ಬಿ. ಪಾಟೀಲ, ಗುತ್ತಿಗೆದಾರರಾದ ಪ್ರಭುಸ್ವಾಮಿ ದಂಡಾವತಿಮಠ, ರವಿ ಗುಡಿಮನಿ, ನವೀನ ಕುಲಕರ್ಣಿ, ಮಹೇಶ ನಾಗರಹಳ್ಳಿ, ಪ್ರಭು ದೇಸಾಯಿಮಠ ಸೇರಿದಂತೆ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ದಾನಿಗಳಿಗೆ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶ್ರೀಗಳು ಸನ್ಮಾನಿಸಿದರು.
ಅಂದಾನಸ್ವಾಮಿ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೊಕ್ಕಳದ ಸ್ವಾಗತಿಸಿದರು. ಉಮೇಶ ಗದಗ ನಿರೂಪಿಸಿದರು. ಗುರು ಕುಂಬಾರ ವಂದಿಸಿದರು. ನಂತರ ನಗರದ ನಟರಂಗ ಕಲ್ಚರಲ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಿದ್ದು ಪಾಡಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಹುಬ್ಬಳ್ಳಿಯ ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ ಮಾತನಾಡಿ, ಕೆಲಸದ ಒತ್ತಡದ ಮಧ್ಯ ಕುಟುಂಬದವರೊಂದಿಗೆ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಮೂಲಕ ಸಂಘವು ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದೆ. ಪ್ರತಿದಿನ ಕುಟುಂಬದವರೊಂದಿಗೆ ಬೆರೆತು ಮಾತನಾಡಿದಾಗ ಸಿಗುವ ಆನಂದವೇ ಬೇರೆ. ಈಗಲೂ ನಾನು ವಾರದಲ್ಲಿ ಒಮ್ಮೆಯಾದರೂ ನನ್ನ ಸಹೋದರ ಹಾಗೂ ಸಹೋದರಿಯರೊಂದಿಗೆ ಮಾತನಾಡದಿದ್ದರೆ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎಂದು ಹೇಳಿದರು.