ವಿಜಯಸಾಕ್ಷಿ ಸುದ್ದಿ, ಗದಗ : ಗದಗ ರೈಲ್ವೆ ಜಂಕ್ಷನ್ 142 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಐತಿಹಾಸಿಕ ಹಿನ್ನೆಲೆ ಹೊಂದಿದ್ದರೂ, ಈ ನಿಲ್ದಾಣವನ್ನು ಡೌನ್ಗ್ರೇಡ್ ಮಾಡುವ ಹುನ್ನಾರ ನಡೆದಿದೆ. ಗದಗ ಜಂಕ್ಷನ್ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಸರಕು ಮತ್ತು ಪ್ರಯಾಣಿಕರ ರೈಲುಗಳ ಸಂಚಾರವನ್ನು ಸುಗಮಗೊಳಿಸುತ್ತಿದೆ. ಗದಗ ನಗರದ ಹೊರ ವಲಯದಲ್ಲಿ ಸದ್ದಿಲ್ಲದೇ ನಿರ್ಮಾಣಗೊಂಡ ಗದಗ ಬೈಪಾಸ್ ಕ್ಯಾಬಿನ್ ನಿರ್ಮಿಸಿದ್ದು, ಪ್ರಯಣಿಕರಿಗೆ ತೊಂದರೆಯಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈಲುಗಳನ್ನು ಬೈಪಾಸ್ಗೆ ಸ್ಥಳಾಂತರಿಸಿದರೆ, ನಗರದಿಂದ 10 ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ಗೆ ಸಾಮಾನ್ಯ ಜನರು ಆಟೋರಿಕ್ಷಾ ಸವಾರಿಗಾಗಿ 200 ರೂ.ಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಇದು ಬಸ್ಗಳಂತಹ ಪರ್ಯಾಯಗಳನ್ನು ಹುಡುಕಲು ಜನರನ್ನು ಒತ್ತಾಯಿಸುತ್ತದೆ. ಇದು ಅವೈಜ್ಞಾನಿಕ ಹಾಗೂ ಪ್ರಯಾಣಿಕರ ವಿರೋಧಿ ನಿರ್ಧಾರವಾಗಿದ್ದು, ನೈಋತ್ಯ ರೈಲ್ವೆ ಈ ಕೂಡಲೇ ಜನವಿರೋಧಿ ನೀತಿ ಕೈಬಿಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಬಾಷಾಸಾಬ ಮಲ್ಲಸಮುದ್ರ, ರಫಿಕ ತೋರಗಲ್, ಚಂದ್ರಕಾಂತ್ ಚವ್ಹಾಣ, ರಮೇಶ ರಾಠೋಡ, ರಾಜು, ಮೇಘರಾಜ, ಹನುಮಂತಗೌಡ್ರು, ಯಲ್ಲಪ್ಪ, ಸತ್ಯನಗೌಡ್ರು, ಮಂಜಪ್ಪ, ಇಮಾಮ್, ನವೀನ್, ಮೈಲಾರಿ, ಸರ್ಫರಾಜ, ಬಿಲಾಲ್, ದಾದಪೀರ್, ಸಾಧೀಕ್, ಅಲ್ತಾಪ್, ಚಂದ್ರು, ಆನಂದಪ್ಪ, ವಿಶ್ವ, ರಮೇಶ, ಭೀಮಶಿ ಮುಂತಾದವರಿದ್ದರು.