ವಿಜಯಸಾಕ್ಷಿ ಸುದ್ದಿ, ಗದಗ : ಸಿಬಿಐ ಸ್ವಯಂಪ್ರೇರಿತ ತನಿಖೆ ನಡೆಸಬಹುದೆಂಬ ಅಧಿಕಾರವನ್ನು ರದ್ದು ಮಾಡುವ ಸಂಪುಟದ ನಿರ್ಣಯದ ಮೂಲಕ ಕರ್ನಾಟಕದ ಕಾಂಗ್ರೆಸ್ ಸರಕಾರವು ಸಂವಿಧಾನ ವಿರೋಧಿಯಾಗಿ ವರ್ತಿಸಿದೆ ಎಂದು ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಡಾ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳಿಂದಲೇ ಕೂಡಿದ ಸಿದ್ದರಾಮಯ್ಯನವರ ಸರಕಾರವು ಭಯಾತಂಕದಿಂದ ಈ ನಿರ್ಧಾರ ಮಾಡಿದಂತಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ಭಂಗ ತರುತ್ತಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೂಡಲೇ ಯಡಿಯೂರಪ್ಪನವರು ಅವರು ರಾಜೀನಾಮೆ ಕೊಡಬೇಕು, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ ಎಂಬರ್ಥದ ಮಾತನಾಡಿದ್ದರು. ಈಗ ಸಿದ್ದರಾಮಯ್ಯನವರು ಪಕ್ಷಪಾತದ ತನಿಖೆ ಬಯಸುತ್ತಿರುವ ಕಾರಣ ಬಯಸಿ ರಾಜೀನಾಮೆ ಕೊಡುತ್ತಿಲ್ಲವೇ? ಜೊತೆಗೆ ಸಿಬಿಐ ತನಿಖೆ ನಡೆದರೆ ಇನ್ನಷ್ಟು ಹಗರಣ ಹೊರಬರುವ ಆತಂಕ ಅವರನ್ನು ಕಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರಲ್ಲದೆ, ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.