ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬರುವ ಗದಗ ಜಿಲ್ಲೆಯ 2ನೇ ಅತಿದೊಡ್ಡ ನಗರ ಎನ್ನಲಾಗುವ ಲಕ್ಮೇಶ್ವರ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದು, ಅವುಗಳನ್ನು ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಲಕ್ಮೇಶ್ವರ ವ್ಯಾಪಾರಸ್ಥರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಮಯದಲ್ಲಿ ವ್ಯಾಪಾರಸ್ಥರ ಸಂಘದವರು ಸಂಸದರೊಂದಿಗೆ ಮಾತನಾಡಿ, ಪಟ್ಟಣದ ಮೂಲಭೂತ ಸೌಕರ್ಯಗಳ ಒಟ್ಟಾರೆ ಅಭಿವೃದ್ಧಿಗಳಾದ ರಸ್ತೆಗಳು, ಪಾದಚಾರಿ ಮಾರ್ಗ, ಒಳಚರಂಡಿ, ಬೀದಿ ದೀಪಗಳು, ಶೌಚಾಲಯಗಳು ಇತ್ಯಾದಿಗಳ ಅಭಿವೃದ್ಧಿಯಾಗಬೇಕಾಗಿದೆ. ಪಟ್ಟಣವು ಸುಮಾರು 50 ಸಾವಿರದಷ್ಟು ಜನಸಂಖ್ಯೆ ಹೊಂದಿದ್ದು, ಇಲ್ಲಿ ಉದ್ಯಾನವನ, ಈಜುಕೊಳ, ಒಳಾಂಗಣ ಕ್ರೀಡಾಂಗಣಗಳು ಇಲ್ಲದಿರುವದು ವಿಷಾದದ ಸಂಗತಿ. ಹಳ್ಳಿಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ತುಂಬಾ ಕಳಪೆ ಸ್ಥಿತಿಯಲ್ಲಿವೆ. ಸಂಪರ್ಕ ರಸ್ತೆ ಸರಿಯಾಗಿಲ್ಲದ ಕಾರಣ ಸಾರ್ವಜನಿಕರು ಪಟ್ಟಣಕ್ಕೆ ಬರಲು ಹಿಂದೆಗೆಯುತ್ತಿದ್ದಾರೆ.
ಇದರಿಂದ ವ್ಯಾಪಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣದಿಂದ ದೊಡ್ಡೂರು, ಸೂರಣಗಿ ಬಾಲೇಹೊಸೂರು, ಪು.ಬಡ್ನಿ, ಕುಂದ್ರಹಳ್ಳಿ, ಸೇರಿದಂತೆ ಅನೇಕ ಹಳ್ಳಿಗಳಿಗೆ ಉತ್ತಮ ಸಂಪರ್ಕ ರಸ್ತೆಗಳನ್ನು ಕಲ್ಪಿಸಬೇಕು. ಯಲವಿಗಿ-ಗದಗ ಹೊಸ ರೈಲು ಮಾರ್ಗದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು, ಯಲವಿಗಿ ರೈಲು ನಿಲ್ದಾಣವು ಗದಗ, ಸವಣೂರು ತಾಲೂಕುಗಳ ಜನರಿಗೆ ಹೆಚ್ಚು ಅನೂಕೂಲವಾಗಿದ್ದು, ಇನ್ನೂ ಕೆಲವು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಮಾಡಿದರೆ ಹೆಚ್ಚು ಅನೂಕೂಲವಾಗುವದು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಾದ ಅಶೋಕ ಬಟಗುರ್ಕಿ, ಮಾಲತೇಶ ಅಗಡಿ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಶಕ್ತಿ ಕತ್ತಿ, ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಸಿದ್ದನಗೌಡ ಬಳ್ಳೊಳ್ಳಿ, ಡಿ.ಡಿ. ಮುಥಾ ಸೇರಿದಂತೆ ಅನೇಕರಿದ್ದರು.