ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪೇಟೆ ಹಾವಳಿ ಹನುಮಂತದೇವರ ದೇವಸ್ಥಾನದಿಂದ ದೂದನಾನಾ ದರ್ಗಾವರೆಗೆ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಕಳಪೆ ಸಾಮಗ್ರಿಗಳನ್ನು ಬಳಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಈ ಕುರಿತು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ಆಗ್ರಹಿದರು.
ಬಹುದಿನಗಳ ನಂತರ ಪೇಟೆಯ ಈ ಪ್ರಮುಖ ರಸ್ತೆಯ ದುರಸ್ಥಿಯ ಬೇಡಿಕೆ ಈಡೇರುತ್ತಿದ್ದು, ಸುಮಾರು 76 ಲಕ್ಷ ರೂಗಳ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಸಿಸಿ ರಸ್ತೆಗಾಗಿ ರಸ್ತೆ ಅಗೆಯಲಾಗಿದೆ. ಅದಕ್ಕಾಗಿ ರಾತ್ರೋರಾತ್ರಿ ಕಳಪೆ ಗುಣಮಟ್ಟದ, ಮಿಶ್ರಿತ ಮಣ್ಣು ರಸ್ತೆಗೆ ಹಾಕುತ್ತಿರುವದರಿಂದ ರಸ್ತೆ ಗುಣಮಟ್ಟದಿಂದ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಶನಿವಾರ ಈ ಕುರಿತು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಅವರನ್ನು ಕರೆಯಿಸಿ ಕಳಪೆ ಮಣ್ಣು ಬಳಸುತ್ತಿರುವದನ್ನು ತೋರಿಸಿದರು.
ಈ ವೇಳೆ ಮಾತನಾಡಿದ ಯುವ ಮುಖಂಡ ಮಂಜುನಾಥ ಮಾಗಡಿ ಹಾಗೂ ನಾಗರಾಜ ಚಿಂಚಲಿ, ಬಹಳ ವರ್ಷಗಳ ಬೇಡಿಕೆಯಾದ ಪಟ್ಟಣದ ಹಾವಳಿ ಹನುಮಂತ ದೇವಸ್ಥಾನದಿಂದ ದೂದನಾನಾ ದರ್ಗಾವರೆಗಿನ ಈ ರಸ್ತೆ ಕಾಮಗಾರಿಗೆ 2024-25ಸಾಲಿನ ಪುರಸಭೆಯ 15ನೇ ಹಣಕಾಸಿನ ಮೂಲ ಅನುದಾನ ಅಂದಾಜು 76 ಲಕ್ಷ ವೆಚ್ಚದಲ್ಲಿ ಬಜಾರ ಚಾವಡಿಯಿಂದ 260 ಮೀಟರ್ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಗೊಂಡ್ಡಿದ್ದು, ಮೊರಂ ಹಾಕಬೇಕಾಗಿದ್ದ ಜಾಗೆಯಲ್ಲಿ ಮಣ್ಣು, ಗೊರಸು, ಹಳ್ಳು ಇರುವ ಮಣ್ಣನ್ನು ಹಾಕಲಾಗಿದೆ. ಇದರಿಂದ ಕಾಮಗಾರಿ ಕಳಪೆ ಆಗುವ ಸಂಭಂವವಿದೆ. ಜಿಲ್ಲಾಧಿಕಾರಿಗಳು ಖುದ್ದಾಗಿ ಬಂದು ಮಣ್ಣು ಪರೀಕ್ಷೆಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಅದೇ ರೀತಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸವಳು ನೀರು ಹಾಗೂ ಸಿಹಿ ನೀರು ಒದಗಿಸುವ ಪೈಪ್ಲೈನ್ಗಳು ಒಡೆದಿದೆ. ಮೊದಲು ಇದನ್ನು ಸರಿಪಡಿಸಿ ನಂತರ ಕಾಮಗಾರಿ ಆಗುವ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯ ಬಜಾರ್ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು, ಮಣ್ಣು ಸರಿಯಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮಣ್ಣು ಪರೀಕ್ಷೆ ಮಾಡಿಸಿ ಪರೀಕ್ಷೆಯಲ್ಲಿ ದೋಷ ಕಂಡುಬಂದರೆ ಗುತ್ತಿಗೆದಾರರಿಗೆ ಹೇಳಿ ಬೇರೆ ಮಣ್ಣನ್ನು ಹಾಕಲು ತಿಳಿಸುವದಾಗಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಅಭಯ ಜೈನ್, ಗುರಪ್ಪ ಮುಳಗುಂದ, ಭರಮಪ್ಪ ಮ್ಯಾಗೇರಿ, ಸಾಗರ ಕಲಾಲ, ಪವನ ಬಂಕಾಪುರ ಮುಂತಾದವರು ಇದ್ದರು.
ಇದು ಪಟ್ಟಣದ ಪ್ರಮುಖ ರಸ್ತೆಯಾಗಿದ್ದು, ಗುಣಮಟ್ಟದ ಕಾಮಗಾರಿ ಆಗಬೇಕೆನ್ನುವದು ಆಡಳಿತ ಮಂಡಳಿಯ ಉದ್ದೇಶವಾಗಿದೆ. ಕಳಪೆ ವಸ್ತುಗಳನ್ನು ಬಳಸಿದ್ದರೆ ಅದನ್ನು ತೆಗೆಸಿ ಗುಣಮಟ್ಟದಲ್ಲಿ ಕಾಮಗಾರಿ ಮಾಡುವಂತೆ ನಿರ್ದೇಶನ ನೀಡಲಾಗುವದು.
– ಯಲ್ಲವ್ವ ದುರಗಣ್ಣವರ.
ಪುರಸಭೆ ಅಧ್ಯಕ್ಷೆ.