ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕತೆಯು ನಮ್ಮ ಹಿರಿಯರ ಆಚಾರ-ವಿಚಾರ, ಸಂಪ್ರದಾಯಗಳ ಮೇಲೆ ಅಗಾಧ ಪ್ರಭಾವ ಬೀರಿ ನಮ್ಮ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸುತ್ತಿದೆ. ಅದಕ್ಕಾಗಿ ಇಂದಿನ ಯುವ ಜನಾಂಗವು ನಮ್ಮ ಮನೆಯ ವಾತಾವರಣ, ಗ್ರಾಮೀಣ ಸೊಗಡು, ನಮ್ಮ ಸಂಬಂಧಗಳು, ನೈತಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೆಮ್ಮೆಯ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಡಾ. ಪಿ.ಎಚ್. ಕ್ಯಾರಕೊಪ್ಪ ಕಿವಿಮಾತು ಹೇಳಿದರು.
ಇಲ್ಲಿನ ನರಸಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜನಪದ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ ವಿಷಯಧಾರಿತ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಶಿವಪ್ಪ ಎಮ್.ಕುರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಕೆ.ಬಿ. ದಳವಾಯಿ, ಡಾ. ಮಹಾದೇವ ವಡೇಕಾರ, ಡಾ. ನಾಗಮ್ಮನವರ್, ಡಾ. ರೇಖಾ ನೀರಲಗಿ, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.
ಗಂಗಾ ಪ್ರಾರ್ಥಿಸಿದರು. ಜುಮೇದ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಶರಣಪ್ಪ ವಂದಿಸಿದರು.


