ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಕುಲದ ಒಳಿತಿಗಾಗಿ ವಿಶ್ವಕ್ಕೆ ಭಾರತ ಕೊಟ್ಟ ಶ್ರೇಷ್ಠ ಕೊಡುಗೆ ಯೋಗವಾಗಿದೆ. ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸು ನೆಲೆಗೊಳ್ಳಲು ಸಾಧ್ಯ. ಆದ್ದರಿಂದ ದೈಹಿಕ, ಮಾನಸಿಕ ದೃಢತೆಗಾಗಿ ಯೋಗ ಬದುಕಿನ ಅಂಗವಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ ಕರಗುದರಿ ಹೇಳಿದರು.
ಅವರು ಶನಿವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸು ಮತ್ತು ದೇಹ ಗಟ್ಟಿ ಇದ್ದರೆ ಮಾನವನ ಯೋಚನೆಗಳು ಉತ್ತಮವಾಗಿರುತ್ತವೆ. ಆದ್ದರಿಂದ ಯೋಗಾಭ್ಯಾಸವು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಲಿ. ಇದರಿಂದ ಎಲ್ಲರ ಮನೆ-ಮನಗಳು ಶಾಂತಿ, ಸೌರ್ಹದತೆಯಿಂದ ಕೂಡಿ ಸಮಾಜ ಉನ್ನತಿಯ ಕಡೆಗೆ ಸಾಗುತ್ತದೆ. ಯೋಗಾಭ್ಯಾಸಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಎಲ್ಲರೂ ಪ್ರಯತ್ನಿಸಬೇಕು. ಮನೆಗಳಲ್ಲಿ ದೈನಂದಿನ ಅಭ್ಯಾಸವಾಗಿ ಯೋಗವನ್ನು ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಈ ವೇಳೆ ದಿವಾಣಿ ನ್ಯಾಯಾಧೀಶರಾದ ಸತೀಶ್ ಎಂ., ವಕೀಲರ ಸಂಘದ ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ವಿ.ಎಂ. ಹುಡೇದಮನಿ ಮುಂತಾದವರು ಉಪಸ್ಥಿತರಿದ್ದರು. ಯೋಗ ಅಭ್ಯಾಸದ ತರಬೇತಿಯನ್ನು ಗೌರಿ ಬಸವರಾಜ ಸಂಗಪ್ಪಶೆಟ್ಟರ್, ಬಸವರಾಜ ಸಂಗಪ್ಪ ಶೆಟ್ಟರ್ ನಡೆಸಿಕೊಟ್ಟರು. ಯೋಗಭ್ಯಾಸದಲ್ಲಿ ಪರಿಣಿತಿ ಹೊಂದಿದ ಅಮರನಾಥ್ ಸೂರಣಗಿ ಇವರು ಯೋಗ ಪ್ರದರ್ಶನ ನೀಡಿದರು. ನಾಗರಾಜ ಸೂರಣಗಿ, ವಿಶ್ವ ಸಂಗಪ್ಪಶೆಟ್ಟರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.