ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆಯರು ಸಾಧನೆ ಮಾಡುವ ನಿಟ್ಟಿನಲ್ಲಿ ಮುಂದಡಿಯಿಟ್ಟರೆ ಆ ಕಾರ್ಯ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಯಾವುದೇ ಸಂಘ-ಸಂಸ್ಥೆಗಳಿರಲಿ ಅಲ್ಲಿರುವವರು ಪ್ರಾಮಾಣಿಕತೆಯಿಂದ, ಸೇವಾ ಮನೋಭಾವದಿಂದ ತೊಡಗಿಸಿಕೊಂಡಲ್ಲಿ ಅಂತಹ ಸಂಸ್ಥೆಗಳು ಯಶಸ್ಸು ಕಾಣುತ್ತವೆ. ಅದಕ್ಕಾಗಿ ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆದು ಬರಬೇಕಾಗಿದೆ ಎಂದು ತಾಯಿ ಪಾರ್ವತಿ ಮಕ್ಕಳ ಬಳಗದ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಪ್ರಾಥಮಿಕ ಶಾಲೆಯಲ್ಲಿ 7ನೇ ವರ್ಗದ ಮಕ್ಕಳಿಗೆ ಬೀಳ್ಕೊಡುಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಆಧುನಿಕ ಕಾಲದಲ್ಲಿ ಮಾಧ್ಯಮ, ತಂತ್ರಜ್ಞಾನ, ಶಿಕ್ಷಣದ ಕಾರಣದಿಂದ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತಹ ಸಾಮರ್ಥ್ಯವನ್ನು ಪಡೆದಿದ್ದಾಳೆ ಎನ್ನುವದಕ್ಕೆ ಪಟ್ಟಣದಲ್ಲಿ ಸುಮಾರು 7-8 ದಶಕಗಳಿಂದ ಮಹಿಳೆಯರೆ ಮುನ್ನಡೆಸಿಕೊಂಡು ಬರುತ್ತಿರುವ ತಾಯಿ ಪಾರ್ವತಿ ಮಕ್ಕಳ ಬಳಗದ ಶೈಕ್ಷಣಿಕ ಸಂಸ್ಥೆಗಳು ಶ್ರೇಷ್ಠ ಉದಾಹರಣೆಯಾಗಿದೆ. ಪ್ರಾಥಮಿಕ ಹಂತವನ್ನು ಮುಗಿಸಿ ಪ್ರೌಢಶಾಲಾ ಹಂತಕ್ಕೆ ಕಾಲಿಡಲಿರುವ ಮಕ್ಕಳು ಉತ್ತಮ ಸಾಧನೆ ಮಾಡಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನೂತನ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದ ಜೆ.ವಿ. ಅರಳಿಕಟ್ಟಿ ಅವರನ್ನು ಮಕ್ಕಳು ಮತ್ತು ಸಿಬ್ಬಂದಿಗಳು ಗೌರವಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ ವಹಿಸಿದ್ದರು. ರೋಹಿಣಿಬಾಯಿ ಬಹದ್ದೂರದೇಸಾಯಿ, ಶಾರದಾ ಮಹಾಂತಶೆಟ್ಟರ, ಪಾಲಕರ ಪ್ರತಿನಿಧಿಗಳಾದ ನಿರ್ಮಲಾ ಬಿಂಕದಕಟ್ಟಿ, ಅಮರೇಶ ತೆಂಬದಮನಿ, ಸಂಸ್ಕೃತ ಪಾಠಶಾಲೆ ಮುಖ್ಯೋಪಾಧ್ಯಾಯ ಭಜಂತ್ರಿ ಉಪಸ್ಥಿತರಿದ್ದರು. ಶಿಕ್ಷಕರಾದ ಐ.ಎ. ಬಳಿಗಾರ ಸ್ವಾಗತಿಸಿದರು, ಪ್ರಕಾಶ ಕೊಂಡಾಬಿAಗಿ, ಕಮಲಾ ಹಿರೇಮಠ ನಿರೂಪಿಸಿದರು. ಎಸ್.ಕೆ. ಹೂಗಾರ ವಂದಿಸಿದರು.
ಸುವರ್ಣಸಿರಿ ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರವ್ಮಠ, ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ದಿಗಂಬರ ಪೂಜಾರ, ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಲಕ್ಷ್ಮೀ ಗಡ್ಡದೇವರಮಠ, ಪ್ರಶಸ್ತಿಗಳು, ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸಮಾಜಕ್ಕಾಗಿ ಮಾಡುವ ಕಾರ್ಯಗಳನ್ನು ಸಮಾಜ ಗುರುತಿಸಿ ಗೌರವಿಸಿದಾಗ ತಾವು ಮಾಡಿದ ಕಾರ್ಯದ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದರು.