ವಿಜಯಸಾಕ್ಷಿ ಸುದ್ದಿ, ಗದಗ : 2023-24ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಾವುದೇ ಭಯವಿಲ್ಲದೇ ಮುಕ್ತ ಮನಸ್ಸಿನಿಂದ ಬರೆಯಲು ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ಆಸನದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಿ.ಸಿ ಕ್ಯಾಮರಾ ಹಾಗೂ ಇನ್ನಿತರ ಅಗತ್ಯ ತಯಾರಿ ಮಾಡಿಕೊಂಡು ಭಯಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಬೇಕೆಂದು ಬೆಳಗಾವಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರು ಹಾಗೂ ಗದಗ ಜಿಲ್ಲಾ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿಗಳೂ ಆದ ಬಿ.ಎಸ್. ಮಾಯಾಚಾರಿ ಮಾರ್ಗದರ್ಶನ ಮಾಡಿದರು.
ಅವರು ಬುಧವಾರ ಗದಗ ಶಹರ ವಲಯ ಹಾಗೂ ಗ್ರಾಮೀಣ ವಲಯದ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಪರೀಕ್ಷಾ ಗಳ ಕೇಂದ್ರಮಾರ್ಗಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸೂಚಿಸಿದ ನಿಯಮಗಳಂತೆ ಮುಖ್ಯ ಅಧೀಕ್ಷಕರು ಮತ್ತು ಅಭಿರಕ್ಷಕರು ತಮ್ಮ ಪಾಲಿನ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಮತ್ತು ಶಿಸ್ತಿನಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಗದಗ ಶಹರ ಹಾಗೂ ಗ್ರಾಮೀಣ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಬುರಡಿ, ವಿ.ವಿ. ನಡುವಿನಮನಿ ಉಪಸ್ಥಿತರಿದ್ದು, ಅಗತ್ಯ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಂ.ಎಚ್. ಕಂಬಳಿ, ತಾ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಣಿಕೇಶ್ವರ, ತಹಸೀಲ್ದಾರ ಕಾರ್ಯಾಲಯದ ಗ್ರೇಡ್-2 ತಹಸೀಲ್ದಾರ ಬಾಲೇಹೊಸೂರ, ಪೊಲೀಸ್ ಎಎಸ್ಐ ವಿ.ವಿ. ಪತ್ತಾರ, ಎರಡೂ ವಲಯಗಳ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಎಸ್ಎಸ್ಎಲ್ಸಿ ತಾಲೂಕಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಶಹರ ವಲಯದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷಾ ತಯಾರಿ ಕುರಿತು ಪರಿಶೀಲನೆ ನಡೆಸಿದರು. ನಂತರ ಕೊಠಡಿ ಮೇಲ್ವಿಚಾರಕರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ, ಕೊಠಡಿ ಮೇಲ್ವಿಚಾರಕರು ತಮಗೆ ವಹಿಸಿದ ಬ್ಲಾಕ್ನಲ್ಲಿ ಯಾವುದೇ ಎಲೆಕ್ಟಾçನಿಕ್ಸ್ ಉಪಕರಣಗಳಿಗೆ ಅವಕಾಶ ನೀಡದೇ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷೆ ಬರೆಯಲು ಬಿಡಬೇಕು. ಪರೀಕ್ಷಾ ಬ್ಲಾಕ್ನಲ್ಲಿ ಕುಳಿತುಕೊಳ್ಳದೇ ಪರೀಕ್ಷಾರ್ಥಿಗಳ ಕಡೆಗೆ ಗಮನ ಹರಿಸುತ್ತ ಎಲ್ಲ ದಾಖಲೆಗಳನ್ನು ನಿರ್ವಹಿಸುತ್ತ ಉತ್ತಮ ರೀತಿಯಲ್ಲಿ ಪರೀಕ್ಷಾ ಕಾರ್ಯವನ್ನು ಮಾಡಬೇಕೆಂದು ಸೂಚಿಸಿದರು.