ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ 84 ಕೋಟಿ ಪಡಿತರದಾರರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಿದೆ. ಆದರೆ ಪಡಿತರ ವಿತರಕರಿಗೆ ನೀಡಲಾಗುವ ಕಮಿಷನ್ ಹಣ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಪಡಿತರ ವಿತರಕರೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಾದರೆ ಪ್ರತಿ ಕ್ವಿಂಟಲ್ಗೆ ಏಕರೂಪದಲ್ಲಿ 250 ರೂ. ಕಮಿಷನ್ ಕೊಡುವ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನ್ನಭಾಗ್ಯದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ವ್ಯವಸ್ಥೆಯನ್ನು ಬಂದ್ ಮಾಡಿ, ಅದೇ ಹಣದಲ್ಲಿ ರೈತರು ಬೆಳೆದ ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸಹಿತ ಇನ್ನಿತರ ಪಡಿತರ ನೀಡುವಂತಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಮೀಕ್ಷೆ ನಡೆಸಿದಾಗ ಶೇ. 95ರಷ್ಟು ಜನ ಪಡಿತರ ನೀಡಬೇಕು ಎನ್ನುವ ಅಭಿಪ್ರಾಯ ದಾಖಲಿಸಿದ್ದಾರೆ. ಸಮೀಕ್ಷೆ ವರದಿ ಎರಡು ಬಾರಿ ಸಚಿವ ಸಂಪುಟವನ್ನು ತಲುಪಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಚನ್ನಕೇಶವ ಗೌಡ, ಪ್ರಭು ಶೆಟ್ಟರ, ದೇವರಾಜು, ನವೀನ ನಾಲವಾಡ, ಬಸವರಾಜ ಜಿ, ನರೇಶ ಬುರುಬುರೆ, ಲಿಂಗಯ್ಯ ಧನ್ನೂರಮಠ, ಗೋಪಾಲ್ ಕಲಬುಗಿರ್, ಮುತ್ತನಗೌಡ ಪಾಟೀಲ ಇತರರು ಇದ್ದರು.
ಪಡಿತರ ವಿತರಣೆ ಕುರಿತು ರಾಜ್ಯ ಸರ್ಕಾರ ತನ್ನದೇ ವರದಿಯನ್ನು ಸ್ವೀಕರಿಸುವುದನ್ನು ಗಮನಿಸಿದರೆ ಆಹಾರ ಸಚಿವ ಮುನಿಯಪ್ಪ ಅವರ ಜತೆ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಮುನಿಯಪ್ಪ ಅವರ ಸೇವೆ ಪರಿಗಣಿಸಿದರೆ ಅವರು ಸಿಎಂ ಆಗುವ ಅಭ್ಯರ್ಥಿ. ಆದ್ದರಿಂದ ಅವರ ಬಗ್ಗೆ ಸಿದ್ದರಾಮಯ್ಯರಿಗೆ ನಿಷ್ಕಾಳಜಿ ಇದೆ. ಮುನಿಯಪ್ಪ ಅವರಿಗೆ ನಗದು ವರ್ಗಾವಣೆ ಬದಲಾಗಿ ಪಡಿತರ ನೀಡಬೇಕೆಂದು ಆಶಯವಿದೆ. ಆದರೆ ಸಿದ್ದರಾಮಯ್ಯ ಅವರು ತಿರಸ್ಕರಿತ್ತಿದ್ದಾರೆ ಎಂದು ಕೃಷ್ಣಪ್ಪ ಆರೋಪಿಸಿದರು.