ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯಾರ್ಥಿಗಳು ಚಿಕ್ಕಂದಿನಿAದಲೇ ಪರಿಸರದ ಬಗ್ಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಈ ಕುರಿತು ಮನೆಯಲ್ಲಿ, ಓಣಿಯಲ್ಲಿ ಜನ ಜಾಗೃತಿ ಬೆಳೆಸುವುದು ಅವಶ್ಯಕವಿದೆ ಎಂದು ಬೂದಿಹಾಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೇಸಾಯಿಪಟ್ಟಿ ಹೇಳಿದರು.
ಶಾಲೆಯ 1ರಿಂದ 7ನೇ ತರಗತಿಯವರೆಗಿನ ಮಕ್ಕಳನ್ನು ಕ್ಷೇತ್ರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಲು ಮರದ ತಿಮ್ಮಕ್ಕನವರು ರಸ್ತೆಗುಂಟ ಮರಗಳನ್ನು ಬೆಳಸುವ ಮೂಲಕ ಅಲ್ಲಿ ತಿರುಗಾಡುವ ಎಲ್ಲರಿಗೂ ನೆರಳನ್ನು ನೀಡಿದ ಮಹನೀಯರಾಗಿದ್ದಾರೆ. ನಾವು ಎಷ್ಟು ಹೆಚ್ಚು ಗಿಡಗಳನ್ನು ಬೆಳೆಸುತ್ತೇವೆಯೋ ಅದರಿಂದ ಉತ್ತಮ ಮಳೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಅವಕಾಶ ಸಿಕ್ಕಾಗಲೆಲ್ಲ ಎಲ್ಲರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಹೇಳಿದರು.
ಶಿಕ್ಷಕ ಸಿ.ಕೆ. ಕೇಸರಿ ಮಾತನಾಡಿ, ಶೈಕ್ಷಣಿಕ ಪ್ರವಾಸ, ಕ್ಷೇತ್ರ ದರ್ಶನ, ವನ ಭೋಜನ ಮುಂತಾದವುಗಳ ಹಿಂದಿರುವ ಆಶಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಿಮ್ಮ ಮಟ್ಟದಲ್ಲಿ ಪರಿಸರದ ಜ್ಞಾನವನ್ನು ಮೂಡಿಸಿಕೊಂಡು, ಇತರರಲ್ಲಿಯೂ ಜಾಗೃತಿ ಮೂಡಿಸಿರಿ ಎಂದರು.