ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ಒಂದು ಅಪರಾಧ. ಇದನ್ನು ಬುಡಸಮೇತ ಕಿತ್ತೊಗೆಯಲು ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮನುಷ್ಯತ್ವವನ್ನು ಎತ್ತಿ ಹಿಡಿಯಬೇಕಿದೆ. ದಬ್ಬಾಳಿಕೆ ಸತತವಾಗಿ ನಡೆದರೆ ಅದು ಜೀತ ಪದ್ಧತಿ ಎನಿಸಿಕೊಳ್ಳುತ್ತದೆ. ಮಾನವೀಯತೆಯನ್ನು ನಾವು-ನೀವೆಲ್ಲರೂ ಸೇರಿ ಉಳಿಸೋಣ. ಅದಕ್ಕೆ ಎಲ್ಲರೂ ಪ್ರತಿಜ್ಞೆ ಮಾಡೋಣ, ಪ್ರತಿಜ್ಞೆಯ ಫಲವನ್ನು ನಾವು ಎಲ್ಲರೂ ಕಾರ್ಯರೂಪಕ್ಕೆ ತರೋಣ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ ಮಾತನಾಡಿ, ಜೀತ ಪದ್ಧತಿ ಎಂದರೆ ಅಲ್ಪ ಪ್ರಮಾಣದ ಸಾಲ ಪಡೆದು ಹಣವನ್ನು ತೀರಿಸಿಕೊಳ್ಳವುದಕ್ಕೆ ಅವರನ್ನು ಮತ್ತೊಬ್ಬರ ಮನೆಯಲ್ಲಿ ದುಡಿಸಿಕೊಳ್ಳುತ್ತಿದ್ದರು. ಆರ್ಟಿಕಲ್ 21ರ ಪ್ರಕಾರ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಸಿಕೊಂಡು ಕಡಿಮೆ ಕೂಲಿ ಪಾವತಿಸುವುದು ಮತ್ತು 1975 ಆಬಾಲಿಷನ್ ಆ್ಯಕ್ಟ್ ಬಂದಿತು. ಈ ಆ್ಯಕ್ಟ್ ಬಂದ ನಂತರ ಈ ರೀತಿ ಶಿಕ್ಷಿಸುವಂತೆ ಪ್ರಕ್ರಿಯೆ ಬಂದಿದೆ. ಇದರಲ್ಲಿ ಜಿಲ್ಲಾಧಿಕಾರಿಗಳು ದಂಡ ವಿದಿಸುವುದಲ್ಲದೆ ಆ್ಯಕ್ಟ್ 16ರ ಪ್ರಕಾರ ಜೈಲು ಶಿಕ್ಷೆಯನ್ನು ವಿಧಿಸಬಹುದು. 13 ಆ್ಯಕ್ಟ್ ಪ್ರಕಾರ ವಿಚಾರಣೆ ಇರುತ್ತದೆ. ಇದರಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸದಸ್ಯರು ಇರುತ್ತಾರೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೃಷಿ, ಕೈಗಾರಿಕೆಗಳಲ್ಲಿ, ಹೋಟಲ್, ಫ್ಯಾಕ್ಟರಿ ಮುಂತಾದವುಗಳಲ್ಲಿ ಒತ್ತಾಯಪೂರ್ವಕವಾಗಿ ಹೆಚ್ಚಿನ ಸಮಯ ಕೆಲಸವನ್ನು ಮಾಡಿಸಿಕೊಂಡು, ಕಡಿಮೆ ಸಂಬಳ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರವಿ ಗುಂಜಿಕರ್, ಡಿವೈಎಸ್ಪಿ ಇನಾಮದಾರ, ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ, ಸ್ಪಂದನಾ ಸ್ವಯಂ ಸೇವಾ ಸಂಸ್ಥೆಯ ಸುಶೀಲಾ, ಐಜೆಎಂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಾಗತಿಸಿದರು, ಸಿದ್ಧಲಿಂಗೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು.
**ಬಾಕ್ಸ್**
ಪ್ರತಿವರ್ಷ ನಮ್ಮ ದೇಶದಲ್ಲಿ ಫೆಬ್ರವರಿ 9ರಂದು ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಬಹಳ ವರ್ಷಗಳ ಹಿಂದೆ ಜೀತ ಪದ್ಧತಿ ಹೆಚ್ಚು ಆಚರಣೆಯಲ್ಲಿತ್ತು. ಕಠಿಣ ಕಾನೂನು ಜಾರಿಗೊಳಿಸಿದ ನಂತರದ ದಿನಗಳಲ್ಲಿ ಇದು ಕ್ರಮೇಣ ಕಡಿಮೆ ಆಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ ತಿಳಿಸಿದರು.