ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿದ್ದೇವೆ. ಸಾಮಾಜಿಕ ನ್ಯಾಯವನ್ನು ರಾಷ್ಟçದ ಎಲ್ಲಾ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ರವಿವಾರ ಜರುಗಿದ ಗಣರಾಜ್ಯೋತ್ಸ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶ ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಸತ್ತಾತ್ಮಕವಾದ ಆಡಳಿತವನ್ನು ಹೊಂದಿದ ಗಣರಾಜ್ಯವಾಗಿದ್ದು, ಜನರಿಂದ-ಜನರಿಗಾಗಿ ಆಡಳಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧ್ಯೇಯ ಮಂತ್ರ. ಈ ಧ್ಯೇಯ ಮಂತ್ರವನ್ನು ಸಾಕಾರಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಿ ನಮ್ಮ ದೇಶವನ್ನು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರು.
ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆಯ ಸಮಾಜ ಕಟ್ಟುವಲ್ಲಿ ಕ್ರೀಯಾಶೀಲ ಪೂರ್ವಕವಾಗಿ ತೊಡಗಿಸಿಕೊಳ್ಳಲು ಸಮರ್ಪಿತರಾಗಲು ದಾಪುಗಾಲುಗಳನ್ನೀಡೋಣ ಎಂದು ಕರೆ ನೀಡಿದರು.
ಗದುಗಿನಲ್ಲಿ ಹೆಮ್ಮೆಯಿಂದ ತಲೆಯೆತ್ತಿರುವ ವಿಶೇಷ ಬೆಳವಣಿಗೆಯಿಂದ ಎಲ್ಲರ ಆಕರ್ಷಣೆಯಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ವಿಶ್ವವಿದ್ಯಾಲಯಕ್ಕೆ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ನಾಮಕರಣವಾದ ಸಂತಸದ ಪ್ರಸಂಗದಲ್ಲಿ ನಾವು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ನಮಿಸೋಣ. ಪ್ರಪಂಚದ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿಗೆ ಭಾಜನರಾಗಿರುವ ಡಾ. ಅಂಬೇಡ್ಕರ ಜೊತೆಗೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬು ರಾಜೇಂದ್ರ ಪ್ರಸಾದ, ಪಂಡಿತ ಜವಾಹರಲಾಲ ನೆಹರು, ಸರ್ದಾರ ವಲ್ಲಭಬಾಯಿ ಪಟೇಲ ಸೇರಿ 300ಕ್ಕೂ ಅಧಿಕ ಪ್ರತಿಭಾವಂತ ಪಂಡಿತರನ್ನು ಅವರ ಅವಿರತ ಶ್ರಮಕ್ಕೆ ಭೌದ್ಧಿಕ ಕೊಡುಗೆಗೆ ಅವರ ತಪಸ್ವಿ ಸ್ವಭಾವಕ್ಕೆ ಮಣಿದು ಸ್ಮರಿಸಿ ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯಲು ಕಂಕಣ ಬದ್ಧರಾಗೋಣ ಎಂದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮ, ಸಂಗೀತ, ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆ, ಸಹಕಾರ, ಔದ್ಯಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಗದಗ ಪರಿಸರದಲ್ಲಿ ಸಂಗೀತ ನಿನಾದಿಸುತ್ತಿದೆ. ನಮ್ಮ ಜಿಲ್ಲೆಯ ಗಾಳಿಯಲ್ಲಿ ವಿದ್ಯುತ್ ಇದೆ. ಗಣಿಗಳಲ್ಲಿ ಬಂಗಾರವಿದೆ. ಇಲ್ಲಿ ದೇವಾಲಯಗಳು, ಬಸದಿಗಳು, ದರ್ಗಾಗಳು ಹಾಗೂ ಅನೇಕ ಪ್ರಾಚೀನ ಸ್ಮಾರಕಗಳಿವೆ. ಖ್ಯಾತಿವೆತ್ತ ಕಲಾವಿದರ ನೆಲೆಬೀಡಾಗಿದೆ. ಸಾಂಸ್ಕöÈತಿಕ ವೈಭವ ಸಾರುವ ಈ ಪರಿಸರ ಐತಿಹಾಸಿಕ, ಪಾರಂಪಾರಿಕ, ನೆಲಗಳನ್ನೊಳಗೊಂಡಿದೆ. ಇಲ್ಲಿ ಧರ್ಮ ಸಮನ್ವಯತೆ ಇದೆ, ಸಾಮರಸ್ಯವಿದೆ. ಇಲ್ಲಿ ಬಂಧುತ್ವ ಬಲಗೊಂಡಿದೆ. ಪ್ರೀತಿ- ಸ್ನೇಹ ಬೆಸೆದುಕೊಂಡಿದೆ. ಪುರಾತತ್ವದ ನೆಲೆಗಳಿವೆ. ಆಧುನಿಕತೆ ತೆರೆದುಕೊಂಡಿದೆ. ಇದು ಸಹಕಾರದ ಗಂಗೋತ್ರಿ, ಒಟ್ಟಿನಲ್ಲಿ ಗದಗ ಜಿಲ್ಲೆ ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಕ ರಾಜಧಾನಿಯಾಗಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಗತ್ತಿನಲ್ಲಿ ಬಡವರನ್ನು ಮೇಲ್ಮಟ್ಟಕ್ಕೇರಿಸುವ ಮೂಲಕ ಕ್ರಾಂತಿಕಾರಕ ಕೆಲಸ ಮಾಡಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದಾಗಿದೆ. 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರಂತರ ಶ್ರಮಿಸುವದರ ಮೂಲಕ ನುಡಿದಂತೆ ನಡೆದಿದ್ದೇವೆ. ಬಡವರ ಕಲ್ಯಾಣ ಕೆಲಸಗಳಿಗೆ ನಮ್ಮ ಸರಕಾರ ಎಂದಿಗೂ ಬದ್ಧವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸದಿಂದ ನುಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಸಿಇಓ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಸಿಎಫ್ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾರತ ಗಣರಾಜ್ಯವಾಗಿ ಪ್ರಜೆಗಳೇ ಪ್ರಭುಗಳಾಗಿ ಬಾಳಲು, ಹೆಮ್ಮೆಯಿಂದ ಬದುಕಲು ಸಂವಿಧಾನ ನಮಗೆಲ್ಲ ಶ್ರೀರಕ್ಷೆ ನೀಡಿದೆ. ನಮ್ಮ ರಾಷ್ಟçವನ್ನು ಇನ್ನಷ್ಟು ಬಲಿಷ್ಠ ರಾಷ್ಟçವಾಗಿ ಸರ್ವರಿಗೂ ಸಾಮಾಜಿಕ ನ್ಯಾಯದ ಅತ್ಯಂತ ಪ್ರಬಲ ಅಸ್ತವಾಗಿರುವ ನಮ್ಮ ಸಂವಿಧಾನವು ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ನ್ಯಾಯ ಪಡೆಯುವ ಅಧಿಕಾರ ನೀಡಿದೆ. ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಪ್ರಜಾಪ್ರಭುತ್ವದಲ್ಲಿದೆ. ಸಮಸ್ಯೆ ಮುಕ್ತವಾದ, ಶೋಷಣೆ ಮುಕ್ತವಾದ ಸಮಾಜವನ್ನಾಗಿಸಲು ನಮ್ಮ ಸಂವಿಧಾನದ ಪಥ ದಾರಿದೀಪವಾಗಿದೆ. ನಾವೆಲ್ಲ ಆ ಪಥದಲ್ಲಿ ಸಾಗಿ ಸಮೃದ್ಧ ಭಾರತ ಕಟ್ಟುವ ಕನಸನ್ನು ನನಸಾಗಿಸಬೇಕಿದೆ.
– ಡಾ. ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಯ ಹರಿಕಾರರು ಹಾಗೂ ಹಸಿವು ಮುಕ್ತ ಕರ್ನಾಟಕ ಮಾಡಿದ ಮುಖ್ಯಮಂತ್ರಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು, ದಿನಾಂಕ 15.12.2024ರಂದು ಜಿಲ್ಲೆಯ ರೋಣಕ್ಕೆ ಆಗಮಿಸಿ, ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 19689.97 ಲಕ್ಷ ರೂ. ವೆಚ್ಚದಲ್ಲಿ 11 ಕಾಮಗಾರಿಗಳ ಶಂಕು ಸ್ಥಾಪನೆಗಳನ್ನು ಹಾಗೂ 5 ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ಒಟ್ಟು 16 ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿಯ ದಾಪುಗಲನ್ನು ಇಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.