ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತ್ಯಾಗ, ಬಲಿದಾನ, ಸಮಾನತೆಯ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವನ್ನು ಶನಿವಾರ ಮುಸ್ಲಿಂ ಬಾಂಧವರು ಶೃದ್ಧಾ ಭಕ್ತಿಯಿಂದ ಆಚರಿಸಿದರು. ಮುಸ್ಲಿಂ ಬಾಂಧವರು ಬೆಳಿಗ್ಗೆ ಹೊಸ ಉಡುಗೆ ತೊಟ್ಟು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಪ್ರಾರ್ಥನೆ ನೇರವೇರಿಸಿದ ಮೌಲಾನಾ ಹಾಪೀಜ್ ಶಕಿಲ್ ಅವರು ಧರ್ಮೋಪದೇಶ ನೀಡಿ, ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು ಅದು ಮನುಷ್ಯತ್ವ. ಸಮಾಜದಲ್ಲಿನ ಬಡವ, ಅಶಕ್ತ, ವಯೋವೃದ್ಧರಿಗೆ ಕೈಲಾದಷ್ಟು ಸಹಾಯ-ಸಹಕಾರ ಮಾಡುವ ಮೂಲಕ ಜಾತಿ ಬೇಧ ಮರೆತು ಎಲ್ಲ ಧರ್ಮೀಯರೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸ, ಸೌಹಾರ್ದತೆ ಮತ್ತು ಸಮರ್ಪಣಾ ಮನೋಭಾವದ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಮನುಷ್ಯ ಜೀವನದಲ್ಲಿ ಪ್ರಾರ್ಥನೆ, ವೃತಾಚರಣೆಗಳು ವ್ಯಕ್ತಿಯನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಈ ನಿಟ್ಟಿನಲ್ಲಿ ಜಗತ್ತಿನ ಶಾಂತಿ-ನೆಮ್ಮದಿಗಾಗಿ ಅಲ್ಲಾನನ್ನು ಪ್ರಾರ್ಥಿಸೋಣ ಎಂದು ಹೇಳಿದರು.
ಈ ವೇಳೆ ಅಂಜುಮನ್, ಆಸಾರ ಕಮಿಟಿಯ ಪ್ರಮುಖರು, ಸಮಾಜದ ಹಿರಿಯರು, ಯುವಕರು, ಮಕ್ಕಳು ಸೇರಿ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣ ಸೇರಿ ತಾಲೂಕಿನ ಮಂಜಲಾಪುರ, ಶಿಗ್ಲಿ, ಹುಲ್ಲೂರ, ಸೂರಣಗಿ, ಬಾಲೇಹೊಸೂರ ಸೇರಿ ಎಲ್ಲೆಡೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.