ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಮಹಾಪ್ರಸಾದ ವಿತರಣೆ ಮತ್ತು 2026ನೇ ಸಾಲಿನ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆ ಜರುಗಿತು.
2026ನೇ ಸಾಲಿನ ಜಾತ್ರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಂ.ಸಿ. ಐಲಿ, ಬಾಲಚಂದ್ರ ಭರಮಗೌಡರ, ಎಸ್.ಎಸ್. ಪಟ್ಟಣಶೆಟ್ಟಿ, ಗಂಗಾಧರ ಹಿರೇಮಠ, ಶೇಖಣ್ಣ ಕವಳಿಕಾಯಿ, ವಿರೂಪಣ್ಣ ಬಳ್ಳೋಳ್ಳಿ, ಕೆ.ಎಚ್. ಬೇಲೂರು, ಕೆ.ಎಸ್. ಚೆಟ್ಟಿ, ಎಮ್.ಎಸ್. ಅಂಗಡಿ ಮುಂತಾದವರನ್ನೊಳಗೊಂಡ ಹಿರಿಯ ಭಕ್ತರ ಸಮಿತಿಯು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನಾಯಕ ಮಾನ್ವಿ ಮಾತನಾಡಿ, ಜಾತ್ರೆಯನ್ನು ಎಲ್ಲ ಭಕ್ತರ ಸಹಕಾರದೊಂದಿಗೆ ಯಶಸ್ವಿಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ, 2025ನೇ ಸಾಲಿನ ಜಾತ್ರಾ ಮಹೋತ್ಸವದ ಸರ್ವ ಪದಾಧಿಕಾರಿಗಳು ಅತ್ಯಂತ ಕ್ರಿಯಾಶೀಲರಾಗಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅಂತೆಯೇ 2026ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಸರ್ವ ಸದ್ಭಕ್ತರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ವೈಶಿಷ್ಟ್ಯಪೂರ್ಣವಾಗಿ ಆಚರಿಸಬೇಕು. ಜಾತ್ರೆಗಳು ಕೇವಲ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರದೆ, ಜನಸಾಮಾನ್ಯರ ಜ್ಞಾನದೀವಿಗೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಪುಸ್ತಕಗಳ ಬಿಡುಗಡೆ, ಕೃಷಿ ಚಟುವಟಿಕೆ, ನಾಡಿನ ಸಾಹಿತಿಗಳಿಂದ ಭಾಷಣ ಹೀಗೆ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಹಾಕಿದ ಬಸವಪಥದಲ್ಲಿಯೇ ಈ ಜಾತ್ರೆಯು ಸಾಗಲಿದ್ದು, ಸಕಲ ಸದ್ಭಕ್ತರು ಜಾತ್ರಾ ಪದಾಧಿಕಾರಿಗಳೊಂದಿಗೆ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು.
ಕಳೆದ 2025ನೇ ಸಾಲಿನ ಜಾತ್ರಾ ಸಮಿತಿಯ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಸರ್ವರನ್ನೂ ಸ್ವಾಗತಿಸಿದರು. ಎಂ.ಸಿ. ಐಲಿ ನಿರೂಪಿಸಿದರು. ಪ್ರಕಾಶ ಅಸುಂಡಿ, ಜೆ.ಕೆ. ಜಮಾದಾರ ಪ್ರಾಸ್ತಾವಿಕವಾಗಿ ಜಾತ್ರೆ ನಡೆದು ಬಂದ ಇತಿಹಾಸವನ್ನು ಸಭೆಗೆ ವಿವರಿಸಿದರು.
ಆ ಪ್ರಕಾರ ಈ ವರ್ಷದ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ವಿನಾಯಕ ಮಾನ್ವಿ, ಉಪಾಧ್ಯಕ್ಷರನ್ನಾಗಿ ಶಿವಯ್ಯ ನಾಲ್ವತ್ವಾಡಮಠ, ಸುಭಾಷ ಚನ್ನಪ್ಪನವರ, ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷರಾಗಿ ವಿರೂಪಾಕ್ಷಪ್ಪ ದಲಾಲಿ, ಸಹ ಕೋಶಾಧ್ಯಕ್ಷರಾಗಿ ಈರಣ್ಣ ಗಡಗಿ, ಕಾರ್ಯದರ್ಶಿಗಳಾಗಿ ಚೇತನ ಅಂಗಡಿ, ಸಹ ಕಾರ್ಯದರ್ಶಿಗಳಾಗಿ ಎಮ್.ಎಚ್. ಹೂಗಾರ, ಚಂದ್ರಶೇಖರ ಜಿ.ರಾಜೂರ, ಎಸ್.ಎಂ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶಗೌಡ ಪಾಟೀಲ, ಯಲ್ಲೂಸಾ ಮೋತಿಲಾಲಸಾ ಹಬೀಬ ಆಯ್ಕೆಯಾಗಿದ್ದಾರೆ.



