ಮಕ್ಕಳ ಮೇಲಿನ ದೌರ್ಜನ್ಯ ಕೊನೆಗೊಳಿಸೋಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಮೇಲಿನ ದೌರ್ಜನ್ಯವು ಮಕ್ಕಳ ಉಳಿವು ಹಾಗೂ ಆರೋಗ್ಯಕ್ಕೆ ಮಾತ್ರವಲ್ಲದೆ ಅವರ ಭಾವನಾತ್ಮಕ ಯೋಗಕ್ಷೇಮ ಹಾಗೂ ಭವಿಷ್ಯದ ಕನಸುಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ನಾವೆಲ್ಲವೂ ಮುಂದಾಗೋಣ ಎಂದು ಗದಗ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಡಿ. ಓದುಗೌಡ್ರ ಹೇಳಿದರು.

Advertisement

ಅವರು ಶನಿವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಹಯೋಗದಲ್ಲಿ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆ ನಂ. 1ರಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಪಾಲನೆ ಮತ್ತು ರಕ್ಷಣೆ ಪ್ರಯುಕ್ತ ಮಕ್ಕಳ ಮೇಲೆ ಜರುಗುವ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಮುಂತಾದವುಗಳ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.

ಮಕ್ಕಳು ಕೆಲವೊಂದು ಅತಿ ಸೂಕ್ಷ್ಮವಾದ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಅಂತಹ ಸಮಸ್ಯೆಗಳನ್ನು ಗೌಪ್ಯವಾಗಿ ಇಡದೇ ಪಾಲಕರೊಂದಿಗೆ ಅಥವಾ ಶಿಕ್ಷಕರೊಂದಿಗೆ ಹಂಚಿಕೊಂಡರೆ ಅವರು ಸೂಕ್ತ ಪರಿಹಾರ ನೀಡುತ್ತಾರೆ. ಇಂತಹ ಮಕ್ಕಳು ಭಯಭೀತರಾಗಬಾರದು. ಧೈರ್ಯದಿಂದ ಇರಬೇಕು, ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದರು.

ಪ್ರಾಸ್ತಾವಿಕವಾಗಿ ಹಿರಿಯ ಶಿಕ್ಷಕರಾದ ಎಂ.ಪಿ. ಮೆಣಸಿನಕಾಯಿ ಮಾತನಾಡಿ, ಟಿ.ವ್ಹಿ, ಮೊಬೈಲ್ ಹಾವಳಿಯಿಂದಾಗಿ ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳು ಓದಿನೆಡೆಗೆ ಹೆಚ್ಚು ಆಸಕ್ತಿ ವಹಿಸಬೇಕು. ತಮಗೆ ಏನಾದರೂ ತೊಂದರೆ ಆಗುತ್ತಿದ್ದಲ್ಲಿ ಹಿರಿಯರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಉತ್ತಮ ಭವಿಷ್ಯ ಹೊಂದುವಲ್ಲಿ ಉತ್ತಮ ವಿಚಾರಗಳನ್ನು ಅಳವಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಎಸ್.ಎಸ್. ಬಿರಾದಾರ ಮಾತನಾಡಿ, ಮಕ್ಕಳು ಮೌಲ್ಯಯುತವಾದ ಬದುಕನ್ನು ಹೊಂದಬೇಕು. ಹೆಣ್ಣು ಮಕ್ಕಳು ಸುರಕ್ಷತೆಯ ದೃಷ್ಟಿಯಿಂದ ಪಾಲಕರು ಹಾಗೂ ಹಿರಿಯರು ಹೇಳಿದ ಮಾತುಗಳತ್ತ ಗಮನವಿಟ್ಟು ಯಾವುದೇ ದುರಭ್ಯಾಸಗಳಿಗೆ ಒಳಗಾಗದೇ ಓದಿ ಸಾಧಿಸಬೇಕು ಎಂದರು.

ಶ್ವೇತಾ ಬಿತ್ತಣ್ಣನವರ ಹಾಗೂ ಅನುಷಾ ಅನ್ನಾರೆಡ್ಡಿ ಪ್ರಾರ್ಥಿಸಿದರು. ಎಚ್.ಎಲ್. ಆಸಂಗಿ ಸ್ವಾಗತಿಸಿದರು. ಎಸ್.ಎಫ್. ಹೊಸಮನಿ ನಿರೂಪಿಸಿದರು. ಸಖಿ ಸಹೇಲಿ ಸಂಘಟನೆಯ ಕಾರ್ಯದರ್ಶಿ ಅಶ್ವಿನಿ ಮಾದಗುಂಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಆಶಾ ಪಟ್ಟಣಶೆಟ್ಟಿ, ನಿರ್ಮಲಾ ಪಾಟೀಲ, ಶ್ರೀದೇವಿ ಮಹೇಂದ್ರಕರ, ಚಂದ್ರಕಲಾ ಸ್ಥಾವರಮಠ ಹಾಗೂ ಪೊಲೀಸ್ ಇಲಾಖೆಯ ಶಂಕ್ರಮ್ಮ ಕೊರವರ, ಮಂಜುನಾಥ ನ್ಯಾವಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಗದಗ ಘಟಕದ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸಾಚಾರ ಹಾಗೂ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿನಿಯರು ಎದೆಗುಂದದೆ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಓದಿನಲ್ಲಿ ಆಸಕ್ತಿ ಹೊಂದಿ ಭವಿಷ್ಯದಲ್ಲಿ ಸಾಧನೆ ಮಾಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here