ಒಗ್ಗಟ್ಟಿನಿಂದ ಬಾಳಿ ಸದೃಢ ಸಮಾಜ ನಿರ್ಮಿಸೋಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಮತ ಎಂದು ಬೇಧಭಾವ ಮಾಡದೆ ಇಡೀ ಮನುಕುಲದ ಶ್ರೇಯಸ್ಸಿಗೆ ದಾರಿ ತೋರಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಿಗೆ ನಾವೆಲ್ಲರೂ ಸದಾ ಚಿರಋಣಿಯಾಗಿರಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.

Advertisement

ನಗರದ ಶ್ರೀ ಶಿವಾನಂದ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾರ್ಶನಿಕ, ತತ್ವಜ್ಞಾನಿ ಮಹಾಯೋಗಿ ವೇಮನರನ್ನು ತಿದ್ದುವ ಮೂಲಕ ಸಮಾಜಕ್ಕೆ ವೇಮನರಂತಹ ತತ್ವಜ್ಞಾನಿಯನ್ನು ನೀಡಿದ ಮಹಾನುಭಾವೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅತಿಥಿ ಸತ್ಕಾರ, ಹಸಿವು ನೀಗಿಸುವ ಕಾರ್ಯದಲ್ಲಿ ಸದಾ ಮುಂದಿರುವ ರೆಡ್ಡಿ ಸಮುದಾಯ ಯಾವಾಗಲೂ ನ್ಯಾಯಪರವಾದ ಹೋರಾಟಲ್ಲಿ ಮುಂಚೂಣಿಯಲ್ಲಿದ್ದು, ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಾಳುವದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕುಟುಂಬಗಳು ಒಗ್ಗಟ್ಟಿನಿಂದ ಹೇಗೆ ಸಾಗಬೇಕು ಎಂಬ ಪರಿಪಾಠವನ್ನು ಕಲಿಸಿದ ಮಹಾಮಾತೆ ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಮಾರ್ಗದರ್ಶನ ಮಾಡಿದ್ದು, ಅವರ ಮಾರ್ಗದರ್ಶನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರಂತೆ ಸ್ವಾರ್ಥವನ್ನು ತ್ಯಾಗ ಮಾಡಿ, ನಿಸ್ವಾರ್ಥ, ಸರಳ ಜೀವನ ನಡೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೀಣಾ ತಿರ್ಲಾಪುರ ಹೇಮರಡ್ಡಿ ಮಲ್ಲಮ್ಮನವರ ತತ್ವಾದರ್ಶ, ಜೀವನ ಸಾಧನೆಗಳ ಕುರಿತು ಮಾತನಾಡಿ, ಪತಿಯಲ್ಲಿ ಪರಮಾತ್ಮನನ್ನು ಕಂಡವರು ಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ. ಶಿವ-ಪಾರ್ವತಿಯರ ಮಹಾನ ಭಕ್ತೆಯಾಗಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಭೂಲೋಕದಲ್ಲಿ ಸತ್ಯ, ಧರ್ಮ ಉಳಿಸಲು ಈ ಧರೆಗೆ ಬಂದರು ಎಂದರು.

ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿದ್ದ ಮಲ್ಲಮ್ಮ ತನ್ನ ಬಳಗಕ್ಕೆಂದೂ ಬಡತನ ಬಾರದಿರಲಿ, ಅವರಿಗೆಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗದಿರಲಿ, ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎಂದು ಮಲ್ಲಿಕಾರ್ಜುನನಿಂದ ವರವನ್ನು ಪಡೆದಿದ್ದಾರೆ ಎಂದು ಹೇಮರಡ್ಡಿ ಮಲ್ಲಮ್ಮನವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ, ಮಾಜಿ ಶಾಸಕರುಗಳಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ವೀರಯ್ಯಸ್ವಾಮಿ ಹಿರೇಮಠ, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ರವೀಂದ್ರ ಮೂಲಿಮನಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಪಂಡಿತ ವೆಂಕಟೇಶ ಅಲ್ಕೋಡ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಭಕ್ತಿ ಸಂಗೀತ ಗಾಯನ ಪ್ರಸ್ತುತಿಸಿದರು. ಎಸ್.ಎಸ್. ಶಿವನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಿಗೆ ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಹನೀಯರ ಆದರ್ಶಗಳನ್ನು ಮೆಲಕು ಹಾಕುವದರ ಮೂಲಕ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ ಸುಧಾರಣೆಗಾಗಿ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಕ್ತಿಗೆ ಮೆಚ್ಚಿ ಶಿವನೇ ಪ್ರತ್ಯಕ್ಷವಾಗಿ ವರವನ್ನು ನೀಡಿದ್ದಾನೆ. ಕುಟುಂಬದಲ್ಲಿ ಕಷ್ಟಗಳು ಎದುರಾದರೂ ಸಹ ಸದಾ ಸಮಾಜದ ಒಳಿತಾಗಲಿ ಎಂದು ಸಾಕ್ಷಾತ್ ಶಿವನಿಂದ ವರ ಬೇಡುತ್ತಾಳೆ. ನಮಗೆ ಯಾರಾದರೂ ಕೆಟ್ಟದನ್ನು ಬಯಸಿದರೆ ಅವರಿಗೆ ಒಳ್ಳೆಯದನ್ನೇ ಬಯಸುವದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

“ಸರ್ಕಾರದಿಂದ ಏರ್ಪಡಿಸುವ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ, ಮಹನೀಯರ ತತ್ವಾದರ್ಶಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಆಯೋಜನೆ ಆಗಬೇಕು. ಮಹನೀಯರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವಾಗಬೇಕು. ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವದು”

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here