ಗದಗ ಜಿಲ್ಲೆಯನ್ನು ಸರ್ವಶ್ರೇಷ್ಠ ಜಿಲ್ಲೆಯಾಗಿಸೋಣ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ನೌಕರರು ತಮ್ಮಗೆ ಒದಗಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರ ಸೇವೆ ಮಾಡಿ ಜನರ ಬದುಕನ್ನು ಹಸನಾಗಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಭಾರತ ರತ್ನ ಪಂಡಿತ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಪ್ರಯುಕ್ತ 2023-24, 2024-25, 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೊತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪಿಯುಸಿಯಲ್ಲಿ 31ನೇ ಸ್ಥಾನದಿಂದ 26ನೇ ಸ್ಥಾನಕ್ಕೆ ಜಿಲ್ಲೆಯ ಫಲಿತಾಂಶ ಮೇಲೇರಿದ್ದು ಸಾಧನೆಯಾಗಿದೆ. ಜಿಲ್ಲೆಯ ಅಧಿಕಾರಿಗಳು, ನೌಕರರು, ಶಿಕ್ಷಕರ ಶ್ರಮ ಈ ಸಾಧನೆಯಲ್ಲಿ ಅಡಗಿದೆ. ಜಿಲ್ಲೆಯ ಫಲಿತಾಂಶ ಒಂದAಕಿಗೆ ಬರಬೇಕು. ಪ್ರಸಕ್ತ ವರ್ಷದ ಫಲಿತಾಂಶ ಸಾಧನೆ ಈಗಾಗಲೇ ನಮ್ಮಲ್ಲಿ ವಿಶ್ವಾಸ ಕುದುರಿಸಿದೆ. ಎಲ್ಲರಲ್ಲೂ ಆ ವಿಶ್ವಾಸ ಮೂಡಬೇಕು ಎಂದು ತಿಳಿಸಿದರು.

ಗದಗ ಜಿಲ್ಲೆಯಲ್ಲಿ ರಾಜಕೀಯವಾಗಿ ಸಾಮರಸ್ಯದ ವಾತವರಣವಿದೆ. ಸಾಮಾಜಿಕವಾಗಿ ಶೋಷಣೆ ಪ್ರಕರಣಗಳು ಜಿಲ್ಲೆಯಲ್ಲಿ ತುಂಬಾ ಕಡಿಮೆ ಇವೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುವರು. ಅಧಿಕಾರಿಗಳಿಗೆ ಕಾನೂನು ರೀತಿಯಲ್ಲಿ ಸಾರ್ವಜನಿಕರ ಸೇವೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇವೆ. ಪರಿಶ್ರಮ ಪಡದೇ ಸಾಧನೆ ಅಸಾಧ್ಯ ಎಂಬುದನ್ನು ನಾವೆಲ್ಲರೂ ಅರಿತು ಶ್ರದ್ಧೆಯಿಂದ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುವ ಅಬ್ಯಾಸ ಮಾಡಿಕೊಳ್ಳೋಣ ಎಂದರು.

ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಅವರ ಕೆಲಸ ಮಾಡಿಕೊಟ್ಟು ಸಂತೋಷ ಕಾಣಬೇಕು. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಈಗಲೂ ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳು, ನೌಕರರು ಇದ್ದಾರೆ. ಇದು ಗದಗ ಜಿಲ್ಲೆಯ ಹೆಮ್ಮೆಯಾಗಿದೆ. ಸಾಧನೆಗೆ ಸಾವಿಲ್ಲ ಎಂಬುದನ್ನು ಅರಿತು ಮುನ್ನಡೆಯೋಣ ಎಂದು ಹೆಮ್ಮೆಯಿಂದ ಹೇಳಿದರು.

ಗದಗ ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.98, 99ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ಸ್ಥಾನ ಪಡೆದಿದೆ. ಇದೇ ನಿಟ್ಟಿನಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡೋಣ. ಸಾಧನೆಗೆ ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ಕಠಿಣ ನಿರ್ಣಯಗಳ ಅಗತ್ಯವಿದೆ. ಸಂವಿಧಾನದ ಸರಿಯಾದ ಅನುಷ್ಠಾದ ಮೂಲಕ ಗದಗ ಜಿಲ್ಲೆಯನ್ನು ಸರ್ವಶ್ರೇಷ್ಠ ಜಿಲ್ಲೆಯಾಗಿಸೋಣ ಎಂದು ಸಚಿವ ಎಚ್.ಕೆ .ಪಾಟೀಲ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯಾವುದೇ ಸರ್ಕಾರ ಜನ ಮೆಚ್ಚುಗೆಗೆ ಪಾತ್ರವಾಗಬೇಕಾದರೆ ಅದು ರಾಜ್ಯ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರ ಮನೆಗೆ ತಲುಪಿಸುವವರು ಸರ್ಕಾರಿ ನೌಕರರು. ಅವರನ್ನು ಗೌರವಿಸುವ ಕಾಲ ಇಂದು ನಮಗೆಲ್ಲ ಒದಗಿ ಬಂದಿದೆ ಎಂದರಲ್ಲದೆ, ನೌಕರರ ನೆಮ್ಮದಿಯ ಬದುಕಿಗಾಗಿ ಒಪಿಎಸ್ ಯೋಜನೆ ಜಾರಿ ಮಾಡುವಂತೆ ಇದೇ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲರ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇ ಬೇರು-ಹೊಸ ಚಿಗುರು ಎಂಬ ಪರಿಕಲ್ಪನೆಯಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಿದೆ. ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆ ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮರೆಯಲು ಸಾಧ್ಯವಿಲ್ಲ. ಅಬ್ಬಿಗೇರಿ ಅಟಲ್ ಬಿಹಾರಿ ಶಾಲೆ, ಮಲ್ಲಸಮುದ್ರ ಶಾಲೆಗಳಲ್ಲಿ ಶೇ.100ರಷ್ಟು ಮಕ್ಕಳು ಉತ್ತೀರ್ಣರಾಗುವ ಮೂಲಕ ಸಾಧನೆ ಮೆರೆದಿದ್ದಾರೆ. ಈ ಸಾಧನೆಯಲ್ಲಿ ಪೋಷಕರ ಪರಿಶ್ರಮವೂ ಇದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಭರತ್ ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಡಿಡಿಪಿಯು ಸೇರಿದಂತೆ ಗಣ್ಯರು ಹಾಜರಿದ್ದರು.

“ನಾವೆಲ್ಲ ಸಾರ್ವಜನಿಕ ಸೇವಕರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಕಾನೂನು ಅಡಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು. ಪ್ರಜೇಗಳೇ ಪ್ರಭುಗಳು ಎಂಬುದನ್ನು ಎಂದಿಗೂ ಮರೆಯಬಾರದು. ಅಧಿಕಾರಿಗಳು ದರ್ಪ-ದೌಲತ್ತು ಬದಿಗಿಟ್ಟು ಸಾರ್ವಜನಿಕರ ಸೇವೆ ಮಾಡುವ ಮನಸ್ಥಿತಿ ಹೊಂದಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ನಾವೆಲ್ಲರೂ ಜೀವನ ನಡೆಸುತ್ತಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು”

– ಎಚ್.ಕೆ. ಪಾಟೀಲ.

ಸಚಿವರು, ಗದಗ.

ನೌಕರರು ಪ್ರತಿದಿನ ಒತ್ತಡದ ಮಧ್ಯದಲ್ಲೇ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನಿವೃತ್ತಿಯಿಂದ ತೆರವಾದ 2.50 ಲಕ್ಷ ಹುದ್ದೆಗಳು ಖಾಲಿಯಿವೆ. ಅವುಗಳನ್ನು ತುಂಬುವ ಕಾರ್ಯ ಹಂತಹAತವಾಗಿ ಆಗಲಿ. ನೌಕರರು ಒತ್ತಡ ನಿರ್ವಹಣಾ ಕೌಶಲ್ಯ ಬೆಳೆಸಿಕೊಳ್ಳಿ, ಆರೋಗ್ಯದ ಕಡೆಗೆ ಗಮನ ಹರಿಸಿ. ನೌಕರರ ಮೇಲೆ ಅನೇಕ ಟೀಕೆ ಟಿಪ್ಪಣಿಗಳು ಬರುತ್ತಿವೆ. ನಾವು ಆದಷ್ಟು ದೂರುಗಳು ಬರದಂತೆ ನಿಗಾ ವಹಿಸಿ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಕಿವಿಮಾತು ಹೇಳಿದರು.


Spread the love

LEAVE A REPLY

Please enter your comment!
Please enter your name here